ಹುಲ್ಲಹಳ್ಳಿ : ಮನುಷ್ಯರ ಜೀವನದಲ್ಲಿ ಎಷ್ಟೇ ಕಷ್ಟಗಳಿರಲಿ ನೋವುಗಳಿರಲಿ ಅವುಗಳನ್ನು ಮರೆಯಸುವ ಶಕ್ತಿ ಇರುವುದು ನಾಟಕಗಳಿಂದ ಎಂದು ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷರಾದ ಚಿಕ್ಕ ರಂಗನಾಯಕ ಅಭಿಪ್ರಾಯಪಟ್ಟರು.
ನಲಿತಾಳಪುರ ಗ್ರಾಮದಲ್ಲಿ ಆಯೋಜಿಸಿದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಅನಾವರಣಗೊಳಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಬೆಳಗಿಂದ ಸಂಜೆಯವರೆಗೂ ಕೆಲಸ ಮಾಡುತ್ತಿದ್ದು ಮತ್ತು ಜೀವನದ ಜಂಜಾಟವನ್ನು ಮರೆಯಲು ಗ್ರಾಮೀಣ ಭಾಗದಲ್ಲಿ ಇಂತಹ ಪೌರಾಣಿಕ ನಾಟಕಗಳನ್ನು ಆಡುತ್ತಾರೆ. ಕಲೆಗಳಲ್ಲಿ ಹಲವಾರು ವಿಧಗಳಿವೆ, ಅವುಗಳಲ್ಲಿ ಪೌರಾಣಿಕ ನಾಟಕವು ಒಂದು. ಪೌರಾಣಿಕ ನಾಟಕಗಳಿಗೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಅತ್ಯಂತ ಅದ್ಭುತವಾಗಿ ಅಭಿನಯಿಸಿ ಎಲ್ಲರ ಮನ ಸೆಳೆಯುತ್ತಾರೆ. ಅವಿದ್ಯಾವಂತರು ಈ ಕಲೆಯನ್ನು ಬಹಳ ಸುಲಭವಾಗಿ ಅಭಿನಯಿಸಿ ತೋರಿಸುತ್ತಾರೆ ಎಂದರು.
ನೋವು ಕಷ್ಟಗಳನ್ನು ಮರೆಸಿ ಸಂತೋಷವನ್ನು ನೀಡುವ ಶಕ್ತಿ ನಾಟಕಗಳಿಗೆ ಇದೆ. ಪ್ರತಿಯೊಬ್ಬರೂ ಕಲೆಗೆ ಸಮಯ ಮೀಸಲಿಟ್ಟರೆ ನಿಮ್ಮ ಹೃದಯಕ್ಕೆ ಸಂತೋಷವನ್ನು ನೀಡುತ್ತದೆ. ರಂಗಭೂಮಿಯಿಂದಲೇ ಬಂದಂತಹ ಡಾ. ರಾಜಕುಮಾರ್ ರವರು ಇಂದು ಇಡೀ ವಿಶ್ವವೇ ಅವರನ್ನು ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಈಗ ಪೌರಾಣಿಕ ನಾಟಕಗಳು ಕಡಿಮೆಯಾಗುತ್ತಿದ್ದು ಇಂದಿನ ಪೀಳಿಗೆಯವರು ಇಂತಹ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವಂತಹವರು ಆಗಬೇಕೆಂದು ತಿಳಿಸಿದರು.