ಪ್ರತಿನಿಧಿ ವರದಿ ಬೇಲೂರು
ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಮೊಬೈಲ್ ವ್ಯಾಮೋಹ ವಿದ್ಯಾರ್ಥಿಗಳಲ್ಲಿ ಹಾಗೂ ಜನತೆಯಲ್ಲಿ ಹೆಚ್ಚಾಗುತ್ತಿರುವುದು ಶೋಚನೀಯ ಎಂದು ಪಟ್ಟಣದ ಶಾಂತಲಾ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಛಾಯಾ ಎಸ್.ಕುಮಾರ್ ಹೇಳಿದರು.
ಕಾಲೇಜು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಸಂಸ್ಕೃತಿಗೆ ಬುನಾದಿಯಾಗಿದೆ. ಈ ಕಾರಣದಿಂದಲೇ ಸಾಹಿತ್ಯ ಅಭಿರುಚಿಯನ್ನು ಎಲ್ಲ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ಪಠ್ಯದ ಜತೆಗೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಬೇಕಿದೆ. ವಿಶ್ವದ ಸಾಹಿತ್ಯದಲ್ಲಿ ಕನ್ನಡದ ಸಾಹಿತ್ಯಕ್ಕೆ ಅಮೂಲಾಗ್ರ ಸ್ಥಾನ ಇರುವ ಕಾರಣದಿಂದ ಕನ್ನಡ ಪುಸ್ತಕಗಳನ್ನು ಓದುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಗೌರವ ಕಾರ್ಯದರ್ಶಿ ಆರ್.ಎಸ್.ಮಹೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಲ್.ರಾಜೇಗೌಡ ಮಾತನಾಡಿದರು. ಸಾಹಿತಿ ಸೋಂಪುರ ಪ್ರಕಾಶ್, ಕಸಾಪ ಮಾಜಿ ಅಧ್ಯಕ್ಷ ಶಿವಮುರ್ತಿ, ಮಾನ ಮಂಜೇಗೌಡ, ಸಾಹಿತಿ ಮಾರುತಿ ದೊಡ್ಡಕೊಡಿಹಳ್ಳಿ ಹಾಜರಿದ್ದರು.
ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಲಾಯಿತು.