ಮೈಸೂರು: ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗಜಪಡೆಯ ಪ್ರತಿಯೊಂದು ಆನೆಯು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಇಂದು ನಾಡಿನಿಂದ ಕಾಡಿನತ್ತ ಕ್ಯಾಪ್ಟನ್ ಅಭಿಮನ್ಯು & ಟೀಂ ತಮ್ಮ ಪ್ರಯಾಣ ಬೆಳೆಸಿದ್ದು, ದಸರಾ ಆನೆಗಳ ಬೀಳ್ಕೊಡುಗೆ ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಅರಮನೆಯಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯು ಅಂಡ್ ಟೀಮ್ ಇಂದು ಕಾಡಿನತ್ತ ಮುಖ ಮಾಡಿದ್ದು., ಈ ವೇಳೆ ಲಾರಿಯನ್ನೇರಲು ಏಕಲವ್ಯ ಕೊಂಚ ಪ್ರತಿರೋಧ ತೋರಿದನಾದರೂ, ಮಾವುತರು ಮತ್ತು ಕಾವಾಡಿಗರು ಏಕಲವ್ಯನನ್ನು ಸಂತೈಸಿ ಲಾರಿಯನ್ನೇರಿಸುವಲ್ಲಿ ಯಶಸ್ವಿಯಾದರು.
ಅದಕ್ಕೂ ಮುನ್ನ ಅರಮನೆ ಆವರಣದಲ್ಲಿ ಗಜಪಡೆಯ 14 ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಅರಮನೆ ಪುರೋಹಿತರಾದ ಪ್ರಹ್ಲಾದ್ ಅವರು ಸಂಪ್ರದಾಯದಂತೆ ದಸರಾ ಗಜಪಡೆಗೆ ಪೂಜೆ ನೆರವೇರಿಸಿದ್ದಾರೆ. ಅರಮನೆ ಅಂಗಳದಲ್ಲಿ ಆನೆಗಳನ್ನ ಸಾಲಾಗಿ ನಿಲ್ಲಿಸಿ ಪೂಜೆ ಮಾಡಲಾಗಿದ್ದು, ಆನೆಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು, ತೆಂಗು, ಬಾಳೆಹಣ್ಣು ನೀಡಿ ದಸರಾ ಗಜಪಡೆಗೆ ಸತ್ಕಾರ ಮಾಡಲಾಯಿತು.
ನಂತರ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಲಾರಿಗಳಲ್ಲಿ ವಿವಿಧ ಆನೆ ಶಿಬಿರಗಳತ್ತ ದಸರಾ ಗಜಪಡೆ ಪಯಣ ಬೆಳೆಸಿದವು. ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಜನರು ಕಿಕ್ಕಿರಿದು ಸೇರಿದ್ದರಲ್ಲದೆ, ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಖುಷಿಯಿಂದ ದಸರಾ ಗಜಪಡೆಗೆ ಬೀಳ್ಕೊಟ್ಟಿದ್ದಾರೆ.ಇನ್ನು ಸೊಂಡಿಲನ್ನೆತ್ತಿ ಸನ್ನೆ ಮಾಡುವ ಮೂಲಕ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟವು. ಆನೆಗಳ ಜೊತೆ ಮಾವುತರು ಕಾವಾಡಿಗರು ಹಾಗು ಕುಟುಂಬ ವರ್ಗವು ಕೂಡ ಆನೆ ಶಿಬಿರಗಳತ್ತ ಪಯಣ ಬೆಳೆಸಿದರು.
.