- ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಘುನಂದನ್ ಅಭಿಪ್ರಾಯ
ಚಿಕ್ಕಮಗಳೂರು: ಗ್ರಾಮದ ಜನರ ಪ್ರೀತಿ, ವಿಶ್ವಾಸ ಗಳಿಸಿ ಕೆಲಸ ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಘುನಂದನ್ ತಿಳಿಸಿದರು.
ಶುಕ್ರವಾರ ಸಂತವೇರಿ ಗ್ರಾಮದ ಗ್ರಂಥಾಲಯ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ವ್ಯವಸ್ಥಾಪಕನಾಗಿ ಬಂದ ನಂತರ ಗ್ರಾಮಸ್ಥರ ಮತ್ತು ರೈತರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಸಂತವೇರಿ ಗ್ರಾಮದಲ್ಲಿ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸಿ, ಈಗ ಬೇರೆಡೆಗೆ ವರ್ಗಾವಣೆ ಆಗಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಗ್ರಾಹಕರಿಗೆ ಹಾಗೂ ರೈತರಿಗೆ ಒದಗಿಸಿ, ಅವರ ನೆರವಿಗೆ ನಿಂತಿರುವುದು ಸಂತೋಷ ತಂದಿದೆ ಎಂದರು.
ಗ್ರಾಮದಲ್ಲಿ ಎಲ್ಲರ ಸಹಕಾರ ದೊರೆತಿದ್ದು, ಒಂದು ಕುಟುಂಬದವರಂತೆ ಕೆಲಸ ಮಾಡಿದ್ದೇನೆ. ಬ್ಯಾಂಕ್ನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾಗಿ ಸಿಕ್ಕಿದ್ದು, ಅದೇ ರೀತಿ ಮುಂದೆ ಬರುವವರಿಗೂ ಇದೇ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಕಾಮನದುರ್ಗ ಗ್ರಾಪಂ ಸದಸ್ಯರಾದ ಜನಾರ್ದನ್, ಮುಬಾರಕ್, ತಾಪಂ ಮಾಜಿ ಸದಸ್ಯ ಎಸ್.ಎ.ಕೃಷ್ಣಪ್ಪ, ಕಾಮನದುರ್ಗ ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ರೈತ ಮುಖಂಡರಾದ ಕೆಂಪರಾಜ್, ಭೀಮಾನಾಯ್ಕ್, ಗ್ರಾಮಸ್ಥರಾದ ಅಶೋಕ್, ಕುಮಾರ್, ರುದ್ರಪ್ಪ, ರಜನಿ, ಲೈಬ್ರರಿ ಮಂಜು, ಎಮಿಲ್ಡಾ ಪಾಯಿಸ್, ಮಂಜುಳ, ವಿದ್ಯುತ್ ಪ್ರತಿನಿಧಿ ಧರ್ಮಲಿಂಗಂ, ಅರುಣ್ ಕುಮಾರ್, ಕೋದಂಡನ್ ಇದ್ದರು.