ಮೈಸೂರು:ಗಣಪತಿ ಹಬ್ಬ ಬಂತೆಂದರೆ ಮನೆಮನಗಳಲ್ಲಿ ಸಂತಸ ಮನೆ ಮಾಡುತ್ತೆ. ಬೀದಿ ಬೀದಿ ಗಳಲ್ಲೂ ಗಣೇಶನ ಮೂರ್ತಿಯಿಟ್ಟು ಯುವಸಮೂಹ ಹಬ್ಬವನ್ನು ಸಂಭ್ರಮಿಸುತ್ತದೆ. ಗಣಪತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸುವುದೇನೋ ಸರಿಯೇ.., ಆದರೆ ಹಬ್ಬದ ನೆಪದಲ್ಲಿ ಪ್ರಕೃತಿಯನ್ನ ಹಾಳು ಮಾಡುವುದು ಸರಿಯಲ್ಲ ಎಂದು ಸುಮಾರು ವರ್ಷಗಳಿಂದಲೂ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇವುಗಳ ನಡುವೆ ಪರಿಸರ ಪ್ರೇಮಿ ಗಣಪ, ಕಲರ್ ರಹಿತ ಗಣಪ ಎಂಬ ಹಲವಾರು ಕಾನ್ಸೆಪ್ಟ್ ಗಳು ಬಂದಿವೆ. ಹಾಗೂ ಅವುಗಳು ಮುಂಚೂಣಿಯಲ್ಲಿದ್ದು ಹಲವರು ಪರಿಸರ ಗಣಪನ ಕೂರಿಸಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.
ಇವುಗಳ ನಡುವೆ ಈ ಬಾರಿಯ ಗಣಪತಿ ಹಬ್ಬದ ವಿಶೇಷವಾಗಿ ಮೈಸೂರಿನ ಬೇಕರಿ ಮಾಲೀಕರೊಬ್ಬರು ವಿನೂತನ ಕಲ್ಪನೆಯೊಂದಿಗೆ ಗಣಪತಿ ಪ್ರತಿಷ್ಠಾಪನೆ ಮಾಡಿದ್ದಾರೆ. ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಯಮ್ಮಿ ಜಂಕ್ಷನ್ ಬೇಕರಿಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ 40 ಕೆಜಿಯ ಚಾಕಲೇಟ್ ಬಳಸಿ ಗಣಪತಿಯನ್ನು ರೂಪಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೇಕರಿಯ ಮಾಲೀಕರಾದ ಚೈತ್ರ ಸತತ ನಾಲ್ಕು ದಿನಗಳ ಪ್ರಯತ್ನದಿಂದ, ಯಾವುದೇ ರಾಸಾಯನಿಕ ಬಳಸದೆ ತಿನ್ನುವ ವಸ್ತುಗಳಿಂದ ವಿಭಿನ್ನವಾಗಿ ಗಣೇಶನ ಮೂರ್ತಿ ತಯಾರು ಮಾಡಿ ಪ್ರತಿಷ್ಠಾಪಿಸಿದ್ದಾರೆ.
ಗ್ರಾಹಕರ ಗಮನ ಸೆಳೆಯುತ್ತಿರುವ ಈ ಚಾಕ್ಲೆಟ್ ಗಣಪ ಪರಿಸರ ಸ್ನೇಹಿ ಮಾತ್ರವಲ್ಲ, ಮಕ್ಕಳ ಫೇವರೇಟ್ ಗಣಪತಿ ಅಂತಲೂ ಹೇಳಬಹುದು. ಈ ಚಾಕ್ಲೆಟ್ ಗಣಪನ ತಯಾರು ಮಾಡಲು ಕೆಫೆಯ ಮಾಲೀಕರು ಸುಮಾರು 20 ಸಾವಿರ ರೂಪಾಯಿ ವೆಚ್ಚ ಭರಿಸಿದ್ದಾರೆ. ಬರೋಬ್ಬರಿ 40 ಕೆಜಿ ಇರುವ ಈ ಚಾಕೋಲೇಟ್ ಗಣಪನನ್ನ ಪರಿಸರಕ್ಕೆ ಹಾನಿಯಾಗದಂತೆ ಪುನರ್ ಬಳಕೆಯಾಗುವ ಚಾಕ್ಲೆಟ್ ನಲ್ಲಿ ತಯಾರು ಮಾಡಲಾಗಿದೆ. ಸಾರ್ವಜನಿಕರ ದರ್ಶನಕ್ಕಾಗಿ ಗ್ಲಾಸ್ ಹೌಸ್ ನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. 5 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿದ್ದು, ನಂತರ ಹಾಲಿನಲ್ಲಿ ವಿಸರ್ಜನೆ ಮಾಡಲಾಗುವುದು. ಚಾಕೋಲೇಟ್ ಸಂಪೂರ್ಣ ಕರಗಿದ ನಂತರ ಅದೇ ಚಾಕ್ಲೆಟ್ ನಲ್ಲಿ ಪ್ರಸಾದ ಮಾಡಿ ಸಾರ್ವಜನಿಕಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.