ಮೈಸೂರು: ಮುಡಾ ಬಹುಕೋಟಿ ಹಗರಣದ ಕೇಂದ್ರ ಸ್ಥಾನವಾಗಿರುವ ಮೈಸೂರಿನ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಶುಕ್ರವಾರ ದಿಢೀರ್ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ 1 ಗಂಟೆಯಿಂದ ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ದದ ಕೇಸ್ ನಲ್ಲಿ ಇದೊಂದು ದೊಡ್ಡ ಬೆಳವಣಿಗೆ ಎಂದು ಬಣ್ಣಿಸಲಾಗಿದೆ. ಮೈಸೂರು ಮುಡಾ ಕಚೇರಿಯ ವಿವಿಧ ಕೊಠಡಿಯಲ್ಲಿ ಅಂದಾಜು 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹಳೆಯ ದಾಖಲೆಗಳನ್ನ ಇಂಚಿಂಚೂ ಪರಿಶೀಲಿಸಿದ್ದಾರೆ. ಸ್ನೇಹಮಯಿ ಕೃಷ್ಣ ದೂರು ಆಧರಿಸಿ ರೇಡ್ ನಡೆದಿದೆ. ಮತ್ತೊಂದೆಡೆ ಪ್ರಕರಣದ A4 ಆರೋಪಿ ದೇವರಾಜು ನಿವಾಸದ ಮೇಲೂ ED ರೇಡ್ ಆಗಿದ್ದು, ಬೆಂಗಳೂರಿನ ಕೆಂಗೇರಿಯಲ್ಲಿರುವ ಭೂ ಮಾಲೀಕ ದೇವರಾಜು ನಿವಾಸದಲ್ಲಿ ಅಧಿಕಾರಿಗಳು ಬೀಡುಬಿಟ್ಟು ಮಹತ್ವದ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಹಗರಣ ಸಂಬಂಧ ದಾಳಿ ನಡೆಸಿರುವ ED ತಂಡಕ್ಕೆ ಸಿ ಆರ್ ಪಿ ಎಫ್ ಯೋಧರಿಂದ ರಕ್ಷಣೆ ನೀಡಲಾಗಿದ್ದು, ಸಿ ಆರ್ ಪಿ ಎಫ್ ಯೋಧರ ಭದ್ರತೆಯೊಂದಿಗೆ ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಸೇರಿದಂತೆ ಒಟ್ಟು ಎರಡು ದಿನಗಳ ಕಾಲ ಮೈಸೂರಿನ ಮುಡಾ ಕಚೇರಿಯಲ್ಲಿ ಇಡಿ ತಂಡ ತನಿಖೆ ನಡೆಸಲಿದೆ.
ಇಡಿ ದಾಳಿ ಕುರಿತು ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಡಿ ಅಧಿಕಾರಿಗಳ ತಂಡ ಮುಡಾಗೆ ಭೇಟಿ ನೀಡಿದೆ. ಅವರು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ.
ಇಂದು ಮತ್ತು ನಾಳೆ ಇಡಿ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಲಿದೆ. ಇಡಿ ಅಧಿಕಾರಿಗಳು ನಿರ್ದೇಶನ ನೀಡಿದರೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಸಹಕಾರ ನೀಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ.