ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಭಿಮತ * ಕೊಡವ ಮಕ್ಕಡ ಕೂಟದಿಂದ 87ನೇ ಪುಸ್ತಕ ಕೂಪದಿ ಬಿಡುಗಡೆ
ಪ್ರತಿನಿಧಿ ವರದಿ ಮಡಿಕೇರಿ
ಯಾವುದೇ ಕ್ಷೇತ್ರದ ಸಾಧನೆಗೆ ವಿದ್ಯೆ ಮತ್ತು ಹಣವಿದ್ದರೆ ಸಾಲದು, ಸಾಧಿಸುವ ಮನಸ್ಸಿರಬೇಕು. ಸಾಹಿತ್ಯ ಕೃಷಿ ಎನ್ನುವುದು ಒಂದು ತಪಸ್ಸು ಇದ್ದಂತೆ ಎಂದು 2024ರ ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ ಕೂಪದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದ್ದು, ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದೆ. ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು. ಕಣ್ಣು, ಕಿವಿ ಮತ್ತು ಹೃದಯಕ್ಕೆ ಕೆಲಸ ಕೊಡಬೇಕು. ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ ಎಂದರು.
ಕೂಪದಿ ಪುಸ್ತಕದ ಬರಹಗಾರರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಕೂಪದಿ ನನ್ನ ಕನಸಿನ 7ನೇ ಪುಸ್ತಕವಾಗಿದ್ದು, ಸಣ್ಣ ಕಥೆಗಳ ಸಂಗ್ರಹವಾಗಿದೆ. ಜೀವ, ಜೀವನ, ಕಣ್ಣಿಗೆ ಕಾಣುವ ಸಹಜತೆ ಇದರಲ್ಲಿದೆ. ಕರ್ಮ, ರೋಷ, ಚೋರೆ ಸಂಬಂಧ, ಮನಸಾಕ್ಷಿ, ಚದಿ, ನಳ, ಮಾಜಿ ಪೋಕತ ನಂಬಲ, ಹಣೆ ಬರಹ, ಮಿಸ್ಡ್ ಕಾಲ್ ಕಥೆಯ ಸಂಗ್ರಹ ಓದುವವರಿಗೆ ಖುಷಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಕೊಡವ ಸಂಘಟನೆ ಮತ್ತು ಕೊಡವ ಸಮಾಜಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ನಾಲ್ಕು ಸಾವಿರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಯುವ ಜನರಲ್ಲಿ ಕೊಡವ ಕಲೆಯ ಬಗ್ಗೆ ಆಸಕ್ತಿ ಮೂಡಿಸಿರುವುದು ಶ್ಲಾಘನಾರ್ಹ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ ದಾನಿಗಳ ಸಹಕಾರದಿಂದ ಈಗಾಗಲೇ 87 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದ್ದು, 13 ಪುಸ್ತಕಗಳು ಪುಸ್ತಕಗಳು ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು 100 ಪುಸ್ತಕಗಳನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.