ಕೆ.ಆರ್.ನಗರ ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಮಾಹಿತಿ
ಪ್ರತಿನಿಧಿ ವರದಿ ಕೆ.ಆರ್.ನಗರ
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗದ ಆದೇಶ ಮೇರೆಗೆ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಹೇಳಿದರು.
ಪಟ್ಟಣದ ಆಡಳಿತ ಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಸಂಬಂಧಿತ ಮಾಹಿತಿ ನೀಡಿದ ಅವರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 252 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 8 ಅತಿಸೂಕ್ಷಮ ಹಾಗೂ 32 ಸೂಕ್ಷಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.
ಕ್ಷೇತ್ರದ ವ್ಯಾಪ್ತಿಯ ಮತ ಪಟ್ಟಿಯಲ್ಲಿ ಒಟ್ಟು ಮತದದಾರರು 2,17,319, ಅದರಲ್ಲಿ ಮಹಿಳೆಯರು 1,9,903, ಪುರುಷ 1,7,404 ಹಾಗೂ ತೃತಿಯಲಿಂಗಿಗಳು 12 ಇದ್ದಾರೆಂದು ಮಾಹಿತಿ ನೀಡಿದರು.
85 ವರ್ಷ ತುಂಬಿದ ಮತದಾರರು ಮತ್ತು ವಿಶೇಷ ಚೇತನರಿಗೆ ಮತಗಟ್ಟೆಗೆ ಬರಲು ತೊಂದರೆಯಾದರೆ ಅವರು ಮನೆಯಿಂದಲೇ ಮತಚಲಾವಣೆ ಮಾಡುವಂತೆ ಅನುಕೂಲ ಕಲ್ಪಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿರುವುದರಿಂದ ಬಿಎಲ್ಒಗಳು ಮನೆ ಮನೆಗೆ ತೆರಳಿ 12-ಡಿ ಫಾರಂಗಳನ್ನು ವಿತರಿಸಲಿದ್ದು ಅವುಗಳನ್ನು ಭರ್ತಿ ಮಾಡಿ ಬೇಡಿಕೆ ಸಲ್ಲಿಸಿದರೆ ಮನೆಯಿಂದಲೇ ಮತದಾನ ಮಾಡಿಸಲು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.
ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆ 2 ಯುವ ಮತಗಟ್ಟೆ ಮತ್ತು 1 ವಿಶೇಷ ಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಿದ್ದು ಇದರ ಜತೆಗೆ 1 ಪಾರಂಪರಿಕ ಮತಗಟ್ಟೆ ತೆರೆಯಲಿದ್ದು ಮತದಾರರು ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಚುನಾವಣಾ ಸಂಬಂಧಿತ ಅಕ್ರಮದ ಬಗ್ಗೆ ಯಾವುದೇ ದೂರುಗಳಿದ್ದರು ಸಾರ್ವಜನಿಕರು ನಿರ್ಬೀತಿಯಿಂದ ಈ ಸಂಖ್ಯೆಗೆ 08223-262371 ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.
20 ಕೆಆರ್ಎನ್-1:- ಕೆ.ಆರ್.ನಗರದ ಮುಸ್ಲಿಂ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ತಹಸಿಲ್ಧಾರ್ ಸಿ.ಎಸ್.ಪೂರ್ಣಿಮಾ ಮತ್ತು ತಾಪಂ ಇಒ ಜಿ.ಕೆ.ಹರೀಶ್ ಪರಿಶೀಲಿಸಿದರು.