-ಕೂರ್ಗ್ ಲೈಫ್ ಸೊಸೈಟಿ, ೧೭ ಕುಟುಂಬಗಳ ನೆಲೆ
-ಕೆ.ಜಿ.ಬೋಪಯ್ಯ ಮನೆ ಈ ವ್ಯಾಪ್ತಿ ಒಳಗೆ ಇಲ್ಲ
-ಸುಪ್ರೀಂಕೋರ್ಟ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಡಿಕೇರಿ ಪೂರ್ವ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಕಟ್ಟಡ ಸೇರಿದಂತೆ ೧೭ ಕುಟುಂಬಗಳು ನೆಲೆ ಕಂಡುಕೊಂಡಿರುವ ಬಗ್ಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಬಿ.ಭಾಸ್ಕರ್ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ.
ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ೬೮ ಜನ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆಂದು, ಕಾವೇರಿಸೇನೆ ಅಧ್ಯಕ್ಷ ಕೆ.ಎ.ರವಿ ಚಂಗಪ್ಪ ನ್ಯಾಯಾಲಯದ ಗಮನ ಸೆಳೆದಿದ್ದರು. ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಮನೆ ಇರುವ ಜಾಗ, ಕೊಡಗು ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ ಇರುವ ಜಾಗ ಮಡಿಕೇರಿ ಪೂರ್ವ ಮೀಸಲು ಅರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಡಿಸಿಎಫ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ವೇ ವರದಿಯನ್ನಾಧರಿಸಿ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ೭-೨-೧೯೨೨ ರಂದು ನೋಟಿಫಿಕೇಶನ್ ಮಾಡಿರುವ ಮಡಿಕೇರಿ ಪೂರ್ವ ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿದ ೨೮೨.೫೫ ಎಕರೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ವೇ ವರದಿ, ಮೀಸಲು ಅರಣ್ಯ ನೋಟಿಫಿಕೇಶನ್, ಸರ್ವೇ ನಕ್ಷೆಯನ್ನು ದಾಖಲಿಸಲಾಗಿದೆ. ತಮ್ಮ ಪ್ರಮಾಣ ಪತ್ರವನ್ನು ತೀರ್ಪು ನೀಡುವ ಸಂದರ್ಭ ಪರಿಗಣಿಸುವಂತೆ ಕೋರಲಾಗಿದೆ.
ಕನ್ನಂಡಬಾಣೆಯ ಬಿ.ಎಂ.ಚಂದ್ರಶೇಖರ್ ೦.೦೪, ದೇವಕಿ ಶೇಷಪ್ಪ ೦.೦೪, ಸರೋಜ ಗೋಪಾಲ್ ೦.೦೪, ಜೋಸೆಫ್ ಫ್ರಾನ್ಸಿಸ್ ೦.೦೪, ಕೆ. ಗೋಪಾಲ್ ಕೃಷ್ಣ ೦.೦೪, ದೇವಮ್ಮ ರುದ್ರಪ್ಪಗೌಡ ೦.೦೪, ತಂಗಮ್ಮ ಚೆಲ್ಲಪ್ಪ ೦.೦೪, ಎನ್.ಎಂ.ಕಾರ್ಯಪ್ಪ ೦.೦೩, ಎ.ಎಸ್.ರೂಪಾ ೦.೦೩, ಎಸ್.ಡಿ.ರಾಘವ ೦.೦೩, ಟಿ.ಯು.ಬೋಪಯ್ಯ ೦.೦೩, ಬಿ.ಎಂ.ರಾಜ್ ೦.೦೩ ಎಕರೆ ಜಾಗ ಇದೆ. ಸರ್ವೇ ನಂ.೨೮೯/೧ರಲ್ಲಿ ಈ ಜಾಗಗಳ ಬರುತ್ತವೆ.
ಚೈನ್ಗೇಟ್ ವ್ಯಾಪ್ತಿಯಲ್ಲಿ ಸರ್ವೇ ನಂ.೫೧೦/೨ರಲ್ಲಿ ಗಣಪತಿ ಪೈ, ಟಿ.ಕೆ.ಸರೋಜ, ರಾಮರಾಯ ಪೈ ಅವರಿಗೆ ೧೯೬೬ ರಲ್ಲಿ ಜಿಲ್ಲಾಧಿಕಾರಿ ೦.೪೦ ಎಕರೆ ಜಾಗ ಮಂಜೂರು ಮಾಡಿದ್ದಾರೆ. ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಹೆಸರಿನಲ್ಲಿ ಸರ್ವೇ ನಂ.೨೮೯/೧ರಲ್ಲಿ ೦.೧೧ ಎಕರೆ ಜಾಗ ಇದೆ. ಕೆ.ಎಸ್.ಚೆಂಗಪ್ಪ (ರೋಷನ್ ಹೋಂಸ್ಟೇ) ೦.೦೩ ಎಕರೆ ಜಗ ಇದೆ. ಕರ್ನಾಟಕ ಅರಣ್ಯ ಕಾಯ್ದೆ ೧೯೬೩, ಸೆಕ್ಷನ್ ೬೪ಎ ಅನ್ವಯ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಕಾನೂನು ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯದ ಸೂಚನೆಯನ್ವಯ ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಮಡಿಕೇರಿ ಪೂರ್ವ ಮೀಸಲು ಅರಣ್ಯ ಜಾಗಕ್ಕೆ ಸಂಬಂಧಿಸಿದ್ದಂತೆ ಮರು ಸರ್ವೇ ಕೈಗೊಳ್ಳಲಾಯಿತು. ಅದಕ್ಕೆ ಮುನ್ನ ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದರು. ಸರ್ವೇ ವರದಿ ಸಲ್ಲಿಸಲು ಮತ್ತೆ ಮೂರು ತಿಂಗಳ ಅವಧಿಯನ್ನು ವಿಸ್ತರಿಸಿ ಸುಪ್ರೀಂಕೋರ್ಟ್ ೮-೧-೨೦೨೪ ರಂದು ಆದೇಶಿಸಿತ್ತು.
ಮಡಿಕೇರಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ನೇತೃತ್ವದಲ್ಲಿ ಜಂಟಿ ಸರ್ವೇ ತಂಡ ರಚಿಸಲಾಯಿತು. ಸರ್ವೇ ಮತ್ತು ಭೂದಾಖಲೆ ಇಲಾಖೆ, ಮೈಸೂರು ಯೋಜನಾ ಘಟಕ ಹಾಗೂ ಅರಣ್ಯ ಇಲಾಖೆಯ ಸರ್ವೇ ವಿಭಾಗದವರನ್ನು ಸೇರಿಸಿಕೊಳ್ಳಲಾಗಿತ್ತು. ಸರ್ವೇ ಕೈಗೆತ್ತಿಕೊಳ್ಳುವ ಮುನ್ನ ಅರ್ಜಿದಾರರು ಹಾಗೂ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ೨೧-೧೨-೨೦೨೩ ರಿಂದ ಜಂಟಿ ಸರ್ವೇ ಕೈಗೆತ್ತಿಕೊಳ್ಳಲಾಗಿತ್ತು. ೮-೨-೨೦೨೪ ರಂದು ಸರ್ವೇ ಕೆಲಸ ಮುಗಿಸಲಾಗಿತ್ತು. ೧೧-೩-೨೦೨೪ ರಂದು ನಕ್ಷೆ ಸಹಿತ ಸರ್ವೇ ವರದಿ ಸಿದ್ಧ ಪಡಿಸಲಾಯಿತು.
======
ಶತಮಾನಗಳ ಇತಿಹಾಸ: ಮಡಿಕೇರಿ ಪೂರ್ವ ಮೀಸಲು ಅರಣ್ಯ ಘೋಷಣೆಗೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷ್ ಆಳ್ವಿಕೆ ಕಾಲಘಟ್ಟ (೭-೦೨-೧೯೨೨ ರಲ್ಲಿ)ದಲ್ಲಿ ಮಡಿಕೇರಿ ಪೂರ್ವ ಮೀಸಲು ಅರಣ್ಯ ಘೋಷಣೆ ಮಾಡಲಾಗಿತ್ತು. ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಸರ್ವೇ ನಂಬರ್ ದಾಖಲಿಸಿರಲಿಲ್ಲ. ಕೇವಲ ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಗಡಿ ನಿಗದಿಪಡಿಸಲಾಗಿತ್ತು ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ಅಧಿಕಾರ ನಡೆಸುತ್ತಿದ್ದ ದಿ ಚೀಫ್ ಕಮಿಷನರ್ ಆಫ್ ಕೂರ್ಗ್ ಅವರು ಮಡಿಕೇರಿಯ ಹೃದಯ ಭಾಗದಲ್ಲಿರುವ ೨೮೨.೫೫ ಎಕರೆ ಜಾಗವನ್ನು ಮರ್ಕರ ಈಸ್ಟ್ ರಿಸರ್ವ್ ಫಾರೆಸ್ಟ್ ಎಂದು ಘೋಷಿಸಿದ್ದರು. ಇದು ೨-೦೩-೧೯೨೨ರ ಕೂರ್ಗ್ ಗೆಜೆಟ್ ಈಯರ್ನಲ್ಲಿ ಪ್ರಕಟವಾಗಿದೆ. ಕರ್ಣಂಗೇರಿ ಹಾಗೂ ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಗೆ ಸೇರಿದ್ದ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಿಸಲಾಗಿತ್ತು. ಆದರೆ, ಸರ್ವೇ ನಂಬರ್ಗಳನ್ನು ಉಲ್ಲೇಖಿಸಿರಲಿಲ್ಲ.
ಕರ್ಣಂಗೇರಿ ಗ್ರಾಮಕ್ಕೆ ಸೇರಿದ ಸರ್ವೇ ನಂ.೨೩೬, ೨೩೭, ೨೪೦, ೨೪೭, ೨೫೦, ೨೫೧/೧, ೨೫೪, ೨೫೫, ೨೫೭, ೨೮೪, ೨೮೫, ೨೮೬, ೨೮೭, ೨೮೮, ೨೮೯/೧, ೫೧೦/೨ ಹಾಗೂ ಇಬ್ನಿವಳವಾಡಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ ೬೬/೧ ವ್ಯಾಪ್ತಿಯ ಪ್ರದೇಶವಾಗಿದೆ. ಕರ್ಣಂಗೇರಿ ಗ್ರಾಮದ ಸರ್ವೇ ನಂ.೨೩೬ ರಲ್ಲಿ ೧೧.೩೮ ಎಕರೆ, ೨೩೭ ರಲ್ಲಿ ೦.೮೦ ಎಕರೆ, ೨೪೦ ರಲ್ಲಿ ೧.೦೨ ಎಕರೆ, ೨೪೭ ರಲ್ಲಿ ೬.೦೬ ಎಕರೆ, ೨೫೦ ರಲ್ಲಿ ೧೪.೬೭ ಎಕರೆ, ೨೫೧/೧ ರಲ್ಲಿ ೧೦.೬೮ ಎಕರೆ, ೨೫೪ ರಲ್ಲಿ ೬೩.೧೫ ಎಕರೆ, ೨೫೫ ರಲ್ಲಿ ೧೬.೯೫ ಎಕರೆ, ೨೫೫ ರಲ್ಲಿ ೧೬.೯೫ ಎಕರೆ, ೨೫೭ ರಲ್ಲಿ ೭೩.೭೭ ಎಕರೆ, ೨೮೪ ರಲ್ಲಿ ೫.೭೩ ಎಕರೆ, ೨೮೫ ರಲ್ಲಿ ೦.೭೫ ಎಕರೆ, ೨೮೬ ರಲ್ಲಿ ೨ ಎಕರೆ, ೨೮೭ ರಲ್ಲಿ ೧.೪೪ ಎಕರೆ, ೨೮೯/೧ ರಲ್ಲಿ ೫೭.೮೯ ಎಕರೆ, ೫೧೦/೨ ರಲ್ಲಿ ೩.೮೦ ಎಕರೆ ಹಾಗೂ ಇಬ್ನಿವಳವಾಡಿ ಗ್ರಾಮದ ಸರ್ವೇ ನಂ.೬೬/೧ ರಲ್ಲಿ ೧೦ ಎಕರೆ ಸೇರಿದಂತೆ ಒಟ್ಟು ೨೮೨.೫೫ ಎಕರೆ ಜಾಗ ಬರುತ್ತದೆ.
======
ರವಿ ಚಂಗಪ್ಪ ಹೋರಾಟ: ಮಡಿಕೇರಿ ಪೂರ್ವ ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿದ ಜಾಗವನ್ನು ಪ್ರಭಾವಿಗಳು ಸೇರಿದಂತೆ ಸಾಕಷ್ಟು ಜನ ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸುವಂತೆ ಕಾವೇರಿ ಸೇನೆ ಸಂಘಟನೆ ನೇತಾರ ಕಿಮ್ಮುಡೀರ ರವಿ ಚಂಗಪ್ಪ ೨೦೨೧ರಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ನೀಡಿದ ದಾಖಲೆಯ ಆಧಾರದಲ್ಲಿ ದಾವೆ ಹೂಡಲಾಗಿತ್ತು. ಆದರೆ, ಹೈಕೋರ್ಟ್ ಕಾವೇರಿ ಸೇನೆ ಸಂಘಟನೆಯ ಕೋರಿಕೆಗೆ ಪುರಸ್ಕಾರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ೨೦೨೨ರಲ್ಲಿ ರವಿ ಚಂಗಪ್ಪ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದ್ದರು. ಸರ್ವೇ ನಂ.೨೮೯ ಹಾಗೂ ಹಿಸ್ಸಾ ಸಂಖ್ಯೆಯಲ್ಲಿ ಜಾಗ ಒತ್ತುವರಿ ಆಗಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು.
=====