ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಿಂದ ಉದ್ಘಾಟನೆ
ಪ್ರತಿನಿಧಿ ವರದಿ ಗುಂಡ್ಲುಪೇಟೆ
ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ನಿರ್ಮಿಸಿದ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.
ನಂತರ ಶಾಸಕರು ಮಾತನಾಡಿ, ಕಳೆದ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು, ನಾಗರಿಕರ ಕುಂದು ಕೊರತೆಗಳನ್ನು ನೀಗಿಸಲು ಸರ್ಕಾರದ ಮೂಲಕ ತಲಾ 1೦ ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದ ವಿವಿಧೆಡೆ ರಾಜೀವ್ ಗಾಂಧಿ ಸೇವಾ ಕೇಂದ್ರಗಳು ತೆರೆಯಲಾಗಿದ್ದು, ಇದು ರಾಷ್ಟ್ರದ ಹಾಗೂ ರಾಜ್ಯದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ಪರಸ್ಪರ ಪರಿಚಯಿಸುವ ಮಾಹಿತಿ ಕೇಂದ್ರ ಹಾಗೂ ಸಾರ್ವಜನಿಕರ ಕನಸು ನನಸಾಗಿಸುವ ಹಲವು ಮಾಹಿತಿಗಳ ಕೋಶವನ್ನು ಒಳಗೊಂದು ಸೇವಾ ಕೇಂದ್ರಗಳಾಗಿ ಕರ್ತವ್ಯ ನಿರ್ವಹಣೆ ಮಾಡಲಿದೆ.
ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಇಂತಹ ಕೇಂದ್ರಗಳಲ್ಲಿ ಸರ್ಕಾರದ ಅಭಿವದ್ಧಿ ಪರ ಚಟುವಟಿಕೆಗಳನ್ನು ಜನಸಾಮಾನ್ಯರಿಗೆ ಸೌಲಭ್ಯಗಳ ಕುರಿತಾಗಿ ತಿಳಿಸುವ ತಾಣವಾಗಿ ನಿರ್ವಹಿಸಬೇಕು. ಅಲ್ಲದೆ ಜನರು ಸಹ ಕೇಂದ್ರವನ್ನು ಹಾಗೂ ಕಂದಾಯ ಅದಾಲತ್ ಅನ್ನು ಎಲ್ಲರೂ ಸದುಪಯೋಗಿಸಿಕೋಳ್ಳಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಗ್ರಾಪಂ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಮಹಾದೇವಮ್ಮ, ಸದಸ್ಯ ಎಂ.ಮಹೇಶ್, ಮಹದೇವಯ್ಯ, ಶಿವಮ್ಮ, ಲಕ್ಷಮ್ಮ, ದೊಡ್ಡಣ್ಣಮ್ಮ, ತಾಯಮ್ಮಣ್ಣಿ, ಪಿಣ್ಣಮ್ಮ, ಸತೀಶ್ ಎಂ.ಶರಣ್, ನಿಂಗರಾಜು, ನಾಗಲಾಂಬಿಕೆ, ಕೆ.ಪ್ರಭುಸ್ವಾಮಿ, ಲಕ್ಷ್ಮಿ, ಮಂಗಳಮ್ಮ, ಆಶಾ, ಅಭಿಷೇಕ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ.ಎಂ.ಮಹೇಶ್, ಬಿಲ್ ಕಲ್ಟರ್ ಎಂ.ಮಲ್ಲು ಹಾಜರಿದ್ದರು.