ಜಾತಿ ಜನಗಣತಿ ವರದಿ ಕುರಿತು ರಾಜ್ಯದಲ್ಲಿ ಶುರುವಾಗಿರುವ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಕಿಡಿಕಾರಿದ್ದಾರೆ. ಜಾತಿ ಗಣತಿ ವರದಿ ಸಲ್ಲಿಕೆಯಾಗುವ ಮೊದಲೇ ಅದರ ಕುರಿತು ರಾಜ್ಯದಲ್ಲಿ ಚರ್ಚೆ ಶುರುವಾಗಿದೆ. ವರದಿಯಲ್ಲೇನಿದೆ ಎಂಬುದು ಅದನ್ನು ಬೇಡ ಎನ್ನುತ್ತಿರುವವರಿಗೂ ಗೊತ್ತಿಲ್ಲ. ಸುಮ್ಮನೆ ಊಹೆಯ ಮೇಲೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಹಾಗಾಗಿ ಅದರ ಕುರಿತು ವರದಿ ಸಲ್ಲಿಕೆಯಾದ ನಂತರ ಮಾತನಾಡೋಣ ಎಂದರು. ಇದೇ ವೇಳೆ ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಿದೆಯೇ? ಯಾರೇ ಆಗಲಿ ವಿಷಯ ಗೊತ್ತಿಲ್ಲದೆ ಮಾತನಾಡಬಾರದು. ಅವರದ್ದು ರಾಜಕೀಯ ಹೇಳಿಕೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಜಾತಿಗಣತಿ ವರದಿ ಸ್ವೀಕರಿಸಿದ್ದಾರೆ.
ಹಾಗಿದ್ದರೆ ಅವರು ಸಮಾಜ ಒಡೆದಿದ್ದಾರೆಯೇ? ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದರು. ಇನ್ನು, ಜಾತಿ ಜನಗಣತಿ ಮೂಲ ವರದಿ ಕಳೆದುಹೋಗಿದೆ ಎಂಬ ಹಿಂದುಳಿದ ವರ್ಗಗಳ ಆಯೋಗದ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ, ಅವರನ್ನು ಕರೆದು ಮಾತನಾಡುತ್ತೇನೆ ಎಂದಷ್ಟೇ ಪ್ರತಿಕ್ರಿಯಿಸಿದರು.