ಎಚ್ಚರ ತಪ್ಪಿದರೆ ಅಪಾಯ ಖಚಿತ
ಪ್ರತಿನಿಧಿ ವರದಿ ನಂಜನಗೂಡು
ನಂಜನಗೂಡು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಜತೆಗೆ, ಕಪಿಲ ನದಿ ದಂಡೆಯಲ್ಲಿ ಮುಡಿಕಟ್ಟೆ ಇರುವುದರಿಂದ ಭಕ್ತರು ಮುಡಿ ತೆಗೆಸಿ, ಹೊಳೆಯಲ್ಲಿ ಸ್ನಾನ ಮಾಡಿ, ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ಕೆಳ ಸೇತುವೆಯನ್ನು ಬಿಟ್ಟು ರಸ್ತೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿರುವುದರಿಂದ ಅಪಾಘಾತಗಳು ಸಂಭವಿಸುತ್ತಿವೆ.
ಕಪಿಲಾ ನದಿ ಮತ್ತು ನಂಜುಂಡೇಶ್ವರ ದೇವಸ್ಥಾನದ ಮಧ್ಯೆ ರಾಷ್ಟ್ರೀಯ ಹೆದ್ದಾರಿ 150 ಎ ಹಾದುಹೋಗಿದೆ. ಕಪಿಲ ನದಿಯಿಂದ ದೇವಸ್ಥಾನಕ್ಕೆ ತೆರಳಲು ದಿ.ಆರ್.ಧ್ರುವನಾರಾಯಣ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ರಸ್ತೆಗೆ ಕೆಳ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಸೇತುವೆಯನ್ನು ಉಪಯೋಗಿಸುವ ಭಕ್ತರ ಸಂಖ್ಯೆ ಕಡಿಮೆ.
ರಾಷ್ಟ್ರೀಯ ಹೆದ್ದಾರಿ 150ಎ ಮೈಸೂರು, ಚಾಮರಾಜನಗರ, ಕೊಯಮತ್ತೂರು ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಸಾವಿರಾರು ವಾಹನಗಳು ರಸ್ತೆಯಲ್ಲಿ ಅತಿ ವೇಗವಾಗಿ ಸಂಚರಿಸುತ್ತವೆ. ಅಪಘಾತಗಳು ಕೂಡ ಹೆಚ್ಚಾಗಿ ನಡೆಯುತ್ತಿವೆ. ಆದರೂ ಕಪಿಲಾ ನದಿಯಿಂದ ದೇವಸ್ಥಾನಕ್ಕೆ ತೆರಳುವ ಭಕ್ತರು, ರಸ್ತೆ ಕೆಳ ಸೇತುವೆ ಇದ್ದರೂ ಶೇ.80ರಷ್ಟು ಜನ ಪ್ರತಿನಿತ್ಯ ಅಪಾಯದಲ್ಲೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಸಾಗುತ್ತಿರುವುದು ವಿಪರ್ಯಾಸವೇ ಸರಿ.
ಮುನ್ನೆಚ್ಚರಿಕೆ ಅಗತ್ಯ : ದೇಗುಲದ ಅಧಿಕಾರಿಗಳು ಮತ್ತು ಸಂಚಾರ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಆದೇಶ ಮಾಡಿ, ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ದಾಟದಂತೆ ಹಾಗೂ ಕೆಳ ಸೇತುವೆಯನ್ನು ಹೆಚ್ಚಾಗಿ ಉಪಯೋಗಿಸುವಂತೆ ಭಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
.