ಪ್ರತಿನಿಧಿ ವರದಿ ಬನ್ನೂರು
23ಬನ್ನೂರು1
ಬನ್ನೂರಿನ ರೋಟರಿ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಮಹೇಂದ್ರಸಿಂಗ್ ಕಾಳಪ್ಪ, ಪ್ರಸನ್ನ, ಅತ್ತಹಳ್ಳಿ ಕೆಂಪೇಗೌಡ, ಡಾ. ನಿರ್ಮಲ ಮೊದಲಾದವರು ಇದ್ದರು.
ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಕಾಡಬಹುದು. ಮನಷ್ಯನಿಗೆ ವಯಸ್ಸಾಗುತ್ತಿದ್ದಂತೆ ವಯೋಸಂಬಂಧಿ ಕಾಯಿಲೆಗಳು ಶುರುವಾಗಬಹುದು. ಕಾಯಿಲೆಗಳು ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ವೈದ್ಯರಿಗೆ ತೋರಿಸಿ ಚಿಕಿತ್ಸೆಯನ್ನು ಪಡೆಯದೇ ನಿರ್ಲಕ್ಷ್ಯವಹಿಸಿದರೆ ಬದುಕಿಗೆ ತೊಂದರೆಯಾಗಬಹುದೆಂದು ರೋಟರಿ ಮಾಜಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.
ಅವರು ಪಟ್ಟಣದ ರೋಟರಿ ಸಂಸ್ಥೆಯ ಆವರಣದಲ್ಲಿ ಶನಿವಾರ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನಿರ್ಮಲಾ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರ ಬದುಕಿನಲ್ಲೂ ಆರೋಗ್ಯ ಮುಖ್ಯ. ಮನಷ್ಯನಿಗೆ ಸಕ್ಕರೆಕಾಯಿಲೆ, ರಕ್ತದೊತ್ತಡದಂತಹ ಕಾಯಿಲೆಗಳನ್ನು ಶ್ರೀಮಂತರ ಕಾಯಿಲೆ ಎನ್ನುವ ಒಂದು ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದ್ದು ಬಡವರು, ಮಕ್ಕಳು ಎನ್ನದೇ ಎಲ್ಲರೂ ಇಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ ಬಡವರ್ಗದವರು ಕಾಯಿಲೆ ಬಂದರೆ ಮನೆ ಮದ್ದು ತೆಗೆದುಕೊಂಡರೆ ಗುಣವಾಗುತ್ತದೆ ಎಂದು ನಿರ್ಲಕ್ಷ್ಯವಹಿಸುತ್ತಾರೆ. ಅದರ ಜೊತೆಗೆ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಔಷದೋಪಚಾರವನ್ನು ಮಾಡಿಸಿಕೊಳ್ಳುವುದು ಒಳ್ಳೆಯದೆಂದು ತಿಳಿಸಿದರು.
ಉಚಿತ ತಪಾಸಣೆಯ ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ವೈರಲ್ ಜ್ವರ, ಥೈರಾಯಿಡ್ ಸಮಸ್ಯೆ, ಉಸಿರಾಟದ ತೊಂದರೆ, ಕುತ್ತಿಗೆ, ಬೆನ್ನು ನೋವು, ಅಲರ್ಜಿ, ಟೈಫಾಯಿಡ್, ಕಾಮಾಲೆ ರೋಗ, ಮಲೇರಿಯಾ, ತಲೆನೋವು, ಹೊಟ್ಟೆನೋವು, ಕಣ್ಣು, ಕಿವಿಯ ತೊಂದರೆಯಂತಹ ತೊಂದರೆಗಳಿಗೆ ಸೂಕ್ತವಾದ ಮಾಹಿತಿ ಔಷಧಿಗಳನ್ನು ನೀಡಲಾಯಿತು.
ಸ್ತ್ರೀಯರು ಹಾಗೂ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಮಾಲೋಚನೆಯನ್ನು ನಡೆಸಲಾಯಿತು. ಮಕ್ಕಳ ವಿವಿಧ ರೀತಿಯ ಸಮಸ್ಯೆಗಳನ್ನು ಪರೀಕ್ಷಿಸಿ ಔಷಧಿಯನ್ನು ನೀಡಲಾಯಿತು. ಬನ್ನೂರಿನ ಸುತ್ತಮುತ್ತಲಿನ ನೂರಾರು ಸಮಸ್ಯೆಯನ್ನು ಹೊಂದಿದವರು ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಪ್ರಸನ್ನ, ಅತ್ತಹಳ್ಳಿ ಕೆಂಪೇಗೌಡ, ಡಾ.ನಿರ್ಮಲ, ಡಾ.ಮುಕುಂದ, ಡಾ.ಕೃಷ್ಣಕುಮಾರ್, ಡಾ.ಕುಮಾರ್, ನಾಗೇಂದ್ರ, ರಾಕೇಶ್, ಬಸವನಹಳ್ಳಿ ರಾಜು, ವೆಂಕಟೇಶ್, ಡಾ. ರಾಜೀವ್, ನಾಗರಾಜು, ನವೀನ್, ವಡ್ಗಲಿಗೌಡ, ಮುರಳಿಗೋಪಾಲ್, ಮಾಣಿಕ್ಚಂದ್ಚೌಧರಿ, ರಾಜೇಂದ್ರ, ನಂಜುಂಡಸ್ವಾಮಿ ಸೇರಿದಂತೆ ಪ್ರಮುಖರು ಇದ್ದರು.