ಪ್ರತಿನಿಧೀ ವರದಿ ದೇವನಹಳ್ಳಿ
ಮಾದಕ ವಸ್ತುಗಳ ವ್ಯಸನದಿಂದ ಜೀವನ ನಾಶವಾಗುತ್ತದೆ. ಇದು ಕಾನೂನಿನ ರೀತಿ ಅಪರಾಧವಾಗಿದ್ದು, ಜೀವನ ಶೈಲಿಯ ಮೇಲೆ, ಆರೋಗ್ಯಕರ ಸಮಾಜದ ಮೇಲೆ ತೀವ್ರವಾಗಿ ಪ್ರಭಾವ ಬೀರುತ್ತದೆ. ಎಲ್ಲರೂ ಮಾದಕ ವಸ್ತುಗಳನ್ನು ಪರಿಸರದಿಂದ ದೂರ ಮಾಡಲು ಶಪಥ ಮಾಡಿ ಎಂದು ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಹಡಪದ್ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಸಾವು, ನೋವು ಸೇರಿದಂತೆ ಯುವ ಜನಾಂಗದ ಭವಿಷ್ಯಕ್ಕೆ ಕಂಟಕವಾಗಲಿದೆ. ಮಾದಕ ವಸ್ತುಗಳ ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ಪ್ರಕರಣಗಳ ಕುರಿತು ಶಾಲಾ ಮುಖ್ಯಸ್ಥರಿಗೆ, ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ನಿಮ್ಮ ಸ್ನೇಹಿತರು ಯಾರಾದರೂ ವ್ಯಸನಿಗಳಾಗಿದ್ದರೆ ಅವರ ಮನ ಪರಿವರ್ತನೆಗೆ ಪ್ರಯತ್ನಿಸಿ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನರಸಿಂಹರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇದರಿಂದ ಅನೇಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಆದ ಕಾರಣ ಎಲ್ಲರೂ ಮಾದಕ ವಸ್ತುಗಳನ್ನು ಸಮಾಜದಿಂದ ಹೊರ ಹಾಕೋಣ ಎಂದರು.
ಇದೇ ವೇಳೆ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀನಿವಾಸಯ್ಯ, ಎನ್.ಎಸ್.ಎಸ್.ಸಂಚಾಲಕ ರವಿಚಂದ್ರ, ಉಪನ್ಯಾಸಕ ರವಿಕುಮಾರ್, ಮೇಲ್ವಿಚಾರಕ ಚಂದ್ರು, ವಿದ್ಯಾರ್ಥಿಗಳು ಇದ್ದರು.