ಜಿಲ್ಲೆ ಮತ್ತೊಮ್ಮೆ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿ > ಹೆಚ್ಚು ಸ್ಥಾನ ಗೆದ್ದಿರುವ ಪಕ್ಷಗಳಿಂಧ ಅಧಿಕಾರ ಹಿಡಿಯಲು ಕಸರತ್ತು
ಕೆಲವರಿಂದ ಹುದ್ದೆಗೇರಲು ನಾಯಕರ ಮನವೊಲಿಕೆಗೆ ಮುಂದು
ಅಧ್ಯಕ್ಷಗಾದಿಗೇರಲು ಜೆಡಿಎಸ್ ಉತ್ಸುಕ
ಪ್ರತಿನಿಧಿ ವರದಿ ಹಾಸನ
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಜಿಲ್ಲೆ ಮತ್ತೊಮ್ಮೆ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಲಿದೆ.
ಜಿಲ್ಲಾ ಕೇಂದ್ರ ಹಾಸನ ಹಾಗೂ ತಾಲೂಕು ಕೇಂದ್ರ ಅರಸೀಕೆರೆ ನಗರಸಭೆಗಳಾದರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಸಕಲೇಶಪುರ ತಾಲೂಕು ಕೇಂದ್ರಗಳು ಪುರಸಭೆಗಳಾಗಿದ್ದು, ಇನ್ನುಳಿದ ಆಲೂರು ಮತ್ತು ಅರಕಲಗೂಡು ತಾಲೂಕು ಕೇಂದ್ರಗಳು ಪಟ್ಟಣ ಪಂಚಾಯಿತಿಗಳಾಗಿವೆ.
ರಾಜ್ಯ ಸರ್ಕಾರ ಸೋಮವಾರ ಮೀಸಲಾತಿ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿದ್ದು, ಕೆಲ ತಿಂಗಳುಗಳಿಂದ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಅಭಿವೃದ್ಧಿಯಲ್ಲೂ ಕುಂಠಿತವಾಗಿದ್ದ ಸ್ಥಳೀಯ ಆಡಳಿತಕ್ಕೆ ಶೀಘ್ರವೇ ಚುನಾವಣೆ ನಡೆಯುವುದರಿಂದ ಇದಕ್ಕೆ ನಾಂದಿ ಹಾಡಬಹುದು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಸ್ಥಾನ ಗೆದ್ದಿರುವ ಪಕ್ಷಗಳ ನಾಯಕರು ಅಧಿಕಾರ ಹಿಡಿಯಲು ಈಗಾಗಲೇ ಕಸರತ್ತಿಗೆ ಇಳಿದಿದ್ದರೆ, ನಿಗದಿಯಾಗಿರುವ ಮೀಸಲು ಕ್ಷೇತ್ರದಿಂದ ಗೆದ್ದಿರುವ ಚುನಾಯಿತರು, ನಮಗೊಂದು ಅವಕಾಶ ಸಿಗಲಿದೆಯೇ ಎಂದು ಎದುರು ನೋಡುತ್ತಿದ್ದಾರೆ. ಇನ್ನೂ ಕೆಲವರು ಹುದ್ದೆಗೇರಲು ಸಂಬಂಧಪಟ್ಟ ನಾಯಕರ ಮನವೊಲಿಕೆಗೂ ಮುಂದಾಗಿದ್ದಾರೆ.
ಹಾಸನ ನಗರಸಭೆ ಅಧ್ಯಕ್ಷ ಸ್ಥಾನದ 2ನೇ ಅವಧಿ ಹಿಂದುಳಿದ ವರ್ಗ(ಎ)ಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗುತ್ತಿದ್ದಂತೆ ಅಧ್ಯಕ್ಷಗಾದಿಗೇರಲು ಜೆಡಿಎಸ್ ಉತ್ಸುಕವಾಗಿದ್ದು, ಪಕ್ಷದಲ್ಲಿ ಹಲವು ಮಂದಿ ಆಕಾಂಕ್ಷಿಗಳ ಪಟ್ಟಿಬೆಳೆಯುತ್ತಿದೆ.
ಸದಸ್ಯರ ಸಂಖ್ಯೆಯಲ್ಲಿ ಏರಿಕೆ: 35 ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 2, ಜೆಡಿಎಸ್ನಿಂದ 17 ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ 13 ಸದಸ್ಯರು ಆಯ್ಕೆಯಾಗಿದ್ದು, ಇವರ ಪೈಕಿ ಇಬ್ಬರು ಸದಸ್ಯರು ಈಗಾಗಲೇ ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ಮೂವರು ಪಕ್ಷೇತರರು ಇದ್ದಾರೆ. ಅವರು ಕೂಡ ಜೆಡಿಎಸ್ ನೊಂದಿಗೆ ಗುರುತಿಸಿಕೊಂಡಿದ್ದು, ಇದಲ್ಲದೆ ಲೋಕಸಭೆ ಸದಸ್ಯ, ಶಾಸಕ, ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು ಸದಸ್ಯರ ಸಂಖ್ಯೆ 38ಕ್ಕೆ ಏರಿಕೆಯಾಗಲಿದೆ.
ಅಧ್ಯಕ್ಷ ಸ್ಥಾನಕ್ಕೆರಲು 19 ಸದಸ್ಯರ ಬೆಂಬಲ ಅಗತ್ಯ ಇರುವುದರಿಂದ ಜೆಡಿಎಸ್ಗೆ ಸುಲಭವಾಗಿ ಅಧಿಕಾರ ದಕ್ಕಲಿದೆ ಎಂಬ ಆಶಾಭಾವನೆ ಇದೆಯಾದರೂ, ಜೆಡಿಎಸ್ನ ಸ್ಥಳೀಯ ಶಾಸಕ, ವಿಧಾನ ಪರಿಷತ್ ಸದಸ್ಯರು ಸಹ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮತ ಹಾಕುವ ಹಕ್ಕು ಹೊಂದಿರುವುದರಿಂದ ದಳ ಸ್ವತಂತ್ರವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಬಹುದು.
ಡಿಸಿಎಂ ಡಿಕೆಶಿ ಒಲವಿಂದ ಆಯ್ಕೆ ವದಂತಿ: ಈ ಮಧ್ಯೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಣತಿ ಮೇರೆಗೆ 6 ಮಂದಿ ಅಲ್ಪ ಸಂಖ್ಯಾತ ಸದಸ್ಯರು ಯಾರಿಗೆ ಒಲವು ತೋರಬಹುದು ಇಲ್ಲ ನಿರ್ಲಿಪ್ತರಾಗಬಹುದೆಂಬ ವದಂತಿ ಇದೆ. ಜೆಡಿಎಸ್, ಬಿಜೆಪಿ ಮೈತ್ರಿ ಕೂಟದಲ್ಲಿ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರ ನೇತೃತ್ವದಲ್ಲಿ ಬಿಜೆಪಿಯ 14 ಸದಸ್ಯರಿದ್ದು, ಇವರ ನಡೆಯೂ ಯಾವ ರೀತಿ ಎನ್ನುವುದು ಪ್ರಶ್ನಾರ್ತಕ ?
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಜೆಡಿಎಸ್ನಿಂದ ಗಿರೀಶ್ ಚನ್ನವೀರಪ್ಪ, ಚಂದ್ರೇಗೌಡ, ಸಿ.ಆರ್.ಶಂಕರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರೆ, ಬಿಜೆಪಿಯ ಜಿ.ಆರ್.ಶ್ರೀನಿವಾಸ್, ದಯಾನಂದ, ಸಂತೋಷ್ ಅವರುಗಳು ಕೂಡ ತೆರೆ ಮರೆಯ ಆಕಾಂಕ್ಷಿಗಳಾಗಿದ್ದಾರೆ.
31 ಸದಸ್ಯ ಬಲದ ಅರಸೀಕೆರೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. 21 ಜೆಡಿಎಸ್ ಸದಸ್ಯರು ಗೆದ್ದಿದ್ದು ಅದರಲ್ಲಿ ಆರು ಜನರ ಸದಸ್ಯತ್ವ ಅನರ್ಹಗೊಂಡಿದೆ. ಪಕ್ಷೇತರರಾಗಿ ಗೆದ್ದಿದ್ದ ಮತ್ತೊಬ್ಬ ಸದಸ್ಯ ಸೇರಿ ಅನರ್ಹರ ಸಂಖ್ಯೆ 7ಕ್ಕೆ ಏರಿದೆ. ವಿಧಾನ ಸಭೆ ಚುನಾವಣೆ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪರ ಕಾಂಗ್ರೆಸ್ಗಾಗಿ ಕೆಲಸ ಮಾಡಿದರು ಎಂಬ ಕಾರಣಕ್ಕೆ ಜೆಡಿಎಸ್ನ ತೂಗುಗತ್ತಿಯೂ ಈ ಸದಸ್ಯರ ಮೇಲಿದೆ.
ಹೊಳೆನರಸೀಪುರ-ಚನ್ನರಾಯಪಟ್ಟಣದಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತವಿದ್ದು, ಕ್ಷೇತ್ರ ಶಾಸಕರಾದ ಎಚ್.ಡಿ.ರೇವಣ್ಣ ಹಾಗೂ ಸಿ.ಎನ್.ಬಾಲಕೃಷ್ಣ ಕೃಪಾಶೀರ್ವಾದ ಯಾರಿಗಿದೆಯೋ ಅವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಹೊಳೆನರಸೀಪುರದ 22 ಪುರಸಭೆ ಸ್ಥಾನಗಳಲ್ಲಿ 21 ಜೆಡಿಎಸ್ ಗೆದ್ದಿದ್ದು, ಕಾಂಗ್ರೆಸ್ನ ಒಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಬಿ (ಮಹಿಳೆ)ಗೆ ಮೀಸಲಾಗಿದೆ.
ಚನ್ನರಾಯಪಟ್ಟಣದಲ್ಲೂ 23 ಸ್ಥಾನಗಳ ಪೈಕಿ 16 ಜೆಡಿಎಸ್ ಹಾಗೂ 7 ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಹುದ್ದೆ ಮೀಸಲಾಗಿದೆ. ಜತೆಗೆ ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು. 17 ಸದಸ್ಯರಿರುವ ಪಪಂ ನಲ್ಲಿ ಕಾಂಗ್ರೆಸ್ 8, ಜೆಡಿಎಸ್ನ 5, ಬಿಜೆಪಿಯ 4 ಸದಸ್ಯರಿದ್ದಾರೆ.
ಶಾಸಕ ಎ.ಮಂಜು ಅವರು ಪಟ್ಟಣ ಪಂಚಾಯಿತಿ ತಮ್ಮ ವಶದಲ್ಲಿಟ್ಟುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಯಲ್ಲೂ ಅದು ಫಲಪ್ರದವಾಗುತ್ತದೆಂಬ ಲೆಕ್ಕಾಚಾರ ನಡೆಯುತ್ತಿದೆ.
11 ಸದಸ್ಯ ಬಲದ ಆಲೂರು ಪಟ್ಟಣ ಪಂಚಾಯಿತಿಯಲ್ಲಿ 6 ಜೆಡಿಎಸ್, 2 ಬಿಜೆಪಿ, 1 ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದು. ಜೆಡಿಎಸ್ನ ಓರ್ವ ಸದಸ್ಯ ನಿಧನರಾಗಿದ್ದಾರೆ. ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
23 ಸದಸ್ಯ ಬಲದ ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ 17, ಜೆಡಿಎಸ್ನ 5 ಹಾಗೂ ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.