ಪ್ರತಿನಿಧಿ ವರದಿ ಮೈಸೂರು
ಮೈಸೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆಯಲ್ಲಿ ಶೇ.೫ ರಿಯಾಯಿತಿ ನೀಡುವ ಗಡುವು ಏ.೩೦ಕ್ಕೆ ಕೊನೆಗೊಂಡಿದ್ದು, ಈ ಅವಧಿಯನ್ನು ಒಂದು ತಿಂಗಳು ವಿಸ್ತರಿಸಬೇಕೆಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮೈಸೂರು ನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಏ.೧ರಿಂದ ೩೦ರವರೆಗೆ ಶೇ.5 ರಿಯಾಯಿತಿ ನೀಡಲಾಗಿತ್ತು. ಆದರೆ ಲೋಕಸಭೆ ಚುನಾವಣೆ, ತಾಂತ್ರಿಕ ದೋಷಗಳು ಹಾಗೂ ಅಧಿಕಾರಿಗಳ ಗೈರು ಹಾಜರಿಯಿಂದ ಅನೇಕ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಎಂಸಿಸಿ ತೆರಿಗೆ ರಿಯಾಯಿತಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ತೆರಿಗೆ ಸಂಗ್ರಹದ ಗುರಿ ೨೨೦ ಕೋಟಿ ಆದರೆ, ಈವರೆಗೂ ಕೇವಲ ೯೦ ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಆದರೆ, ಕಳೆದ ಬಾರಿ ಈ ಸಮಯಕ್ಕೆ ೧೯೦ ಕೋಟಿ ರೂ. ಸಂಗ್ರಹಿಸಿದ್ದರು. ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ ವಿವಿಧ ಕಾರಣಗಳಿಂದಾಗಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದ ದೊಡ್ಡ ಪ್ರಮಾಣದ ಆಸ್ತಿ ಮಾಲೀಕರಿಗೆ ಸಹ ಉಪಯುಕ್ತವಾಗುಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜೆ.ಪಿ.ನಗರ ಯೋಗ ಟ್ರಸ್ಟ್ ಸದಸ್ಯ ವೆಂಕಟೇಶ್, ಜೆ.ಪಿ.ನಗರ ಟೆನಿಸ್ ಕ್ಲಬ್ ಸದಸ್ಯ ವಾಸು ಇದ್ದರು.
=================
ನಾಳೆ ಕನ್ನಡ ಚಿತ್ರಗೀತೆ ಕಾರ್ಯಕ್ರಮ
ಪ್ರತಿನಿಧಿ ವರದಿ ಮೈಸೂರು:
ಅಮೃತ ವರ್ಷಿಣಿ ಗಾನವೃಂದದ ವತಿಯಿಂದ ಮೇ.೫ರಂದು ಸಂಜೆ ೫.೩೦ಕ್ಕೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಹಳೇ ಬೇರು, ಹೊಸ ಚಿಗುರು ಎಂಬ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಅಮೃತೇಶ್ ಮಾತನಾಡಿ, ಕಾರ್ಯಕ್ರಮದಲ್ಲಿ ಸುಮಾರು ೩೪ ಚಿತ್ರಗೀತೆಗಳನ್ನು ಒಟ್ಟು ೧೧ ಮಂದಿ ಗಾಯಕರು ಪ್ರಸ್ತುತ ಪಡಿಸಲಿದ್ದಾರೆ. ಇದು ಕೊರೊಕೆ ಕಾರ್ಯಕ್ರಮವಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್. ಕೋಮಲಾ, ಕನಕರಾಜು, ಬಾಲುಪ್ರಕಾಶ್ ಇದ್ದರು.
=================