ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಅರ್ಕೇಶ್ ಬೇಸರ
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸ್ಥಾಪನಾ ದಿನಾಚರಣೆ
ಪ್ರತಿನಿಧಿ ವರದಿ ಹಾಸನ
ಅರೆ ಮಿಲಿಟರಿ ಪಡೆಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ತ್ಯಾಗ ಬಲಿದಾನ ಮಾಡುತಿದ್ದರೂ, ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳಲ್ಲಿ ಒಂದು ಸಣ್ಣ ಭಾಗವೂ ಸಿಆರ್ಪಿಎಫ್ ಪಡೆಗಳಿಗೆ ಸಿಗದೆ ಇರುವುದು ಶೋಚನಿಯ ಸಂಗತಿಯಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ ನಿವೃತ್ತ ಮಹಾ ನಿರೀಕ್ಷಕ ಹಾಗೂ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಅರ್ಕೇಶ್ ಬೇಸರ ವ್ಯಕ್ತಪಡಿಸಿದರು.
ನಗರದ ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ 85ನೇ ಸ್ಥಾಪನಾ ದಿನಾಚರಣೆಯಲ್ಲಿ ಪೊಲೀಸ್ ಧ್ವಜಾ ರೋಹಣ ನೆರವೇರಿಸಿ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬ್ರಿಟಿಷರ ಕಾಲದಲ್ಲಿ ಆರಂಭವಾದ ಇಂಡಿಯಾ ಪೊಲೀಸ್ ಪಡೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಸ್ವತಂತ್ರ ಭಾರತದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿ ದೇಶದ ಪ್ರಗತಿಯಲ್ಲಿ ಸಾಗುತ್ತಿದೆ. ಯುದ್ಧ ಕಾಲದಲ್ಲಿ ಸೈನಿಕರ ಜತೆ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಯೋಧರು ದುಡಿದಿದ್ದಾರೆ. ಟೆರರಿಸಂ, ನಕ್ಸಲಿಸಂ, ಕೋಮು ಸಂಘರ್ಷ, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ದೇಶದ ಏಕತೆ ಮತ್ತು ಅಖಂಡತೆ ಕಾಪಾಡುವುದರಲ್ಲಿ ಸಿಆರ್ಪಿಎಫ್ ಮಹತ್ವದ ಪಾತ್ರವಹಿಸಿದೆ ಎಂದರು.
ಚುನಾವಣೆ ವೇಳೆ ಸಿಆರ್ಪಿಎಫ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. 3.5 ಲಕ್ಷ ಸಂಖ್ಯೆ ಇರುವ ಸಿಆರ್ಪಿಎಫ್ ಮತ್ತು ಅದರ ಸಹೋದರ ಸಂಸ್ಥೆಯಾದ ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಸಿಎಎಸ್ಎಫ್, ಎಸ್ಎಸ್ಬಿ ಸೇರಿ ಸುಮಾರು 10 ಲಕ್ಷ ಯೋಧರ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ದೇಶದ ಸೇನೆಯಲ್ಲಿ 15 ಲಕ್ಷದ ಬಲವಿದ್ದರೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಥವಾ ಅರೆ ಮಿಲಿಟರಿ ಪಡೆಗಳಲ್ಲಿ 10 ಲಕ್ಷ ಇದೆ. ಪ್ರತಿ ಮೂರು ದಿನಕ್ಕೆ ಒಬ್ಬ ಅರೆ ಮಿಲಿಟರಿ ಪೊಲೀಸ್ ಪಡೆಯ ಯೋಧ ಹುತಾತ್ಮ ಆಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಸಿಆರ್ಪಿಎಫ್ ಯೋಧರಿಗೂ ನೀಡಬೇಕು ಹಾಗೂ ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳೂ ಆಲೋಚನೆ ಮಾಡಬೇಕು ಎಂದು ಮನವಿ ಮಾಡಿದರು.
ಎಂ.ಜಿ.ರಮೇಶ್ ಮಾತನಾಡಿ, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘವಿದ್ದು, ನಮಗೆ ಸಿಗಬೇಕಾದ ಸೌಲಭ್ಯ ಸರ್ಕಾರದಿಂದ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಸೌಲಭ್ಯ ಕೊಡಿ ಎಂದು ಆದೇಶ ಮಾಡಿದ್ದರೂ ಇದುವರೆಗೂ ಯಾವುದೇ ಸೌಲಭ್ಯ ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ಅವರು, ಸೇನಾ ಮತ್ತು ಅರೆಸೇನಾ ಪಡೆ ಕಲ್ಯಾಣ ಬೋರ್ಡ್ ಮಾಡಿದ್ದರು. ಮುಂದೆ ಬಂದವರು ರದ್ದು ಮಾಡಿದರು ಎಂದು ಬೇಸರ ಹೊರ ಹಾಕಿದರು. ಮುಂದೆ ಅರೆ ಸೇನಾಪಡೆ ಮತ್ತು ಸೇನಾಪಡೆಯ ಒಂದು ಕಲ್ಯಾಣ ವಸತಿ ಮತ್ತು ಪುನರ್ ವಸತಿ ಕಲ್ಯಾಣ ಕೇಂದ್ರ ಮಾಡಬೇಕು. ಹೆಂಡತಿ ಮಕ್ಕಳು ಬಿಟ್ಟು, 20-35 ವರ್ಷದವರೆಗೂ ದೇಶ ಸೇವೆ ಮಾಡಿ ಜೀವ ಉಳಿಸಿಕೊಂಡು ವಾಪಸ್ ಬರುತ್ತಾರೆ. ಅಂಥವರಿಗೆ ಆರ್ಮಿ ರೀತಿಯಲ್ಲಿ ನೌಕರಿ ಕೊಡುವ ಕಾರ್ಯ ಆಗಬೇಕು ಎಂದರು.
ಸಿಐಎಸ್ಎಫ್ ಯೂನಿಟ್, ಎಂಸಿಎಫ್ ಡೆಪ್ಯೂಟಿ ಕಮಾಂಡೆಂಟ್ ಅಭಯ ಆನಂದ್ ಪಾಟೀಲ್, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಪಿ.ಎನ್.ರೆಡ್ಡಿ, ಕಾರ್ಯದರ್ಶಿ ಟಿ.ವಿ.ಗೋಪಾಲ್, ಸಿಐಎಸ್ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಶಿವರಾಮ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ವಿ.ನಾಗೇಶ್, ಅಧ್ಯಕ್ಷ ಯಶೋದರಮೂರ್ತಿ, ಯೋಧರ ಸಮೂಹದ ಅಧ್ಯಕ್ಷ ಎಚ್.ಕುಮಾರ್, ಚೆಲುವೇಗೌಡ, ಹನುಮಂತಪ್ಪ, ಲಿಂಗೇಗೌಡ, ರಾಜನಾಯಕ್, ಬಂಗಾರಿ ಇದ್ದರು.