ನ್ಯಾಯಾಧೀಶೆ ಜೆ.ಕೆ.ದಾಕ್ಷಾಯಿಣಿ ಕಳವಳ
ಪ್ರತಿನಿಧಿ ವರದಿ ಹಾಸನ
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ಪದವಿ ಪಡೆಯುತ್ತಿದ್ದರೂ ಸಹ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕಲು ಬೇಕಾದ ಸಂಸ್ಕಾರ, ವಿನಯ, ತಾಯಿ-ತಂದೆ, ಗುರುಗಳಿಗೆ ಗೌರವ ಕೊಡುವ ನಡವಳಿಕೆ ಮರೆಯುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಹಾಸನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ.ಕೆ.ದಾಕ್ಷಾಯಿಣಿ ಕಳವಳ ವ್ಯಕ್ತಪಡಿಸಿದರು.
ನಗರದ ಎಂ.ಕೃಷ್ಣ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಕಾಲೇಜು ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲ ವೃತ್ತಿಯಲ್ಲಿ ಯಶಸ್ಸು ಪಡೆಯಲು ಬದ್ಧತೆ, ಧೈರ್ಯ ನಿರಂತರ ಅಧ್ಯಯನ ಶೀಲತೆ ಅಗತ್ಯವಿದ್ದು, ಈ ಗುಣಗಳನ್ನು ವಿದ್ಯಾರ್ಥಿಗಳು ಕಾನೂನು ವ್ಯಾಸಂಗ ಮಾಡುವ ಅವಧಿಯಲ್ಲಿ ಬೆಳೆಸಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ ಮಾತನಾಡಿ, ವಕೀಲ ವೃತ್ತಿಯು ಒಂದು ಶ್ರೇಷ್ಠ ವೃತ್ತಿಯಾಗಿದ್ದು, ವಕೀಲರು ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ, ದುರ್ಬಲರಿಗೆ ಶೋಷಿತರಿಗೆ ನ್ಯಾಯ ಒದಗಿಸುವ ಮನೋಭಾವನೆ ಹೊಂದಿರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಎಂ.ಕೃಷ್ಣ ಕಾನೂನು ಕಾಲೇಜಿನ ಉಪಾಧ್ಯಕ್ಷ ಚಂದ್ರಶೇಖರ್ ಅಯ್ಯರ್ ವಹಿಸಿದ್ದರು, ಅತಿಥಿಗಳಾಗಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ವ್ಯವಸ್ಥಾ ಪಕ ಎಸ್. ಶಿವರಾಮಕೃಷ್ಣಯ್ಯ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ವಿ.ಶ್ರೀನಿವಾಸ್, ಬೋಧಕ ಮತ್ತು ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.