ಪ್ರತಿನಿಧಿ ವರದಿ ವಿರಾಜಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ ಗೌರವಾರ್ಥಕೆ.ಎಂ.ಎ. ಇಫ್ತಾರ್ ಆತ್ಮೀಯ ಕೂಟ-2024 ಗೌರಿಕೆರೆ ಸಮೀಪದ ಮದರಸಾ ಸಭಾಂಗಣದಲ್ಲಿ ನಡೆಯಿತು.
ಸಾಮಾಜಿಕ, ಶೈಕ್ಷಣಿಕ ಮತ್ತು ಜೀವ ಕಾರುಣ್ಯ ಕ್ಷೇತ್ರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಇಸ್ಲಾಂ 14 ಶತಮಾನಗಳ ಹಿಂದೆಯೇ ವ್ರತಾಚರಣೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಹಲವು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿದೆ. ಉಪವಾಸವು ಹೃದಯ ಸ್ತಂಭನ, ಪಾರ್ಶ್ವವಾಯು, ಮಧುಮೇಹ ಖಿನ್ನತೆಯಂತಹ ಗಂಭೀರ ಕಾಯಿಲೆಗಳ ಸಂಭವವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುವುದರಿಂದ ಹೃದಯಾಘಾತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಲುಗಳಲ್ಲಿನ ಸ್ನಾಯು ಸೆಳೆತ, ಅಸ್ತಮಾ, ನರರೋಗ, ಮಹಿಳೆಯರಲ್ಲಿ ಗರ್ಭಾಶಯದ ರಕ್ತಸ್ರಾವವನ್ನು ಸುಧಾರಿಸುತ್ತದೆ ಎಂದರು.
ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಸಮಕಾಲೀನ ಯುಗದಲ್ಲಿ ನೈತಿಕತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಯುವಕರು ಆಧ್ಯಾತ್ಮಿಕತೆಯೊಂದಿಗೆ ಮರುಸಂಪರ್ಕಿಸುವುದು ಮತ್ತು ಉತ್ತಮ ಸಾಮಾಜಿಕ ಬೆಳವಣಿಗೆಯ ಹಾದಿಯತ್ತ ತಮ್ಮನ್ನು ಮರುಹೊಂದಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ 4 ನೇ ಕಡ್ಡಾಯ ಕರ್ಮವಾಗಿರುವ ಪವಿತ್ರ ರಂಜಾನ್ ತಿಂಗಳ ವೃತಾಚಾರಣೆ ತೀರಾ ಮಹತ್ವವಾದದ್ದು. ಎಲ್ಲಾ ವಿಧದ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ ಎಂದರು.
ವಿರಾಜಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ್, ಕೆ. ಎಂ. ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಸಂಸ್ಥೆಯ ಮಾಜಿ ನಿರ್ದೇಶಕ ಚಿಮ್ಮಿಚ್ಚಿರ ಎ. ಅಬ್ದುಲ್ಹಾ ಹಾಜಿ ಇದ್ದರು. ಸಾಮೂಹಿಕ ಪ್ರಾರ್ಥನೆಗೆ ವಿರಾಜಪೇಟೆಯ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ರವೂಫ್ ಹುದವಿ ನೇತೃತ್ವ ನೀಡಿದರು.
ಸಂಘಟನಾ ಕಾರ್ಯದರ್ಶಿ ಎಂ.ಎA. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಮುಸ್ತಫ ವಂದಿಸಿದರು.
ಫೋಟೋ 1 ಎಂಡಿಕೆ 01 : ಇಫ್ತಾರ್ ಕೂಟದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿದರು.