ಸಾರ್ವಜನಿಕ ಅಹವಾಲು ಸ್ವೀಕಾರ, ಕುಂದು ಕೊರತೆ ಸಭೆ ।
ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್ ಅಭಿಪ್ರಾಯ
ಪ್ರತಿನಿಧಿ ವರದಿ ಸೋಮವಾರಪೇಟೆ
ಕರ್ನಾಟಕ ಲೋಕಾಯುಕ್ತದ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆ ನಡೆಯಿತು.
ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕೆಲಸಗಳಲ್ಲಿ ವಿಳಂಬ ಸೇರಿದಂತೆ ಇನ್ನಿತರ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳಿದ್ದರೆ ಲೋಕಾಯುಕ್ತಕ್ಕೆ ಸಲ್ಲಿಸಬಹುದು ಎಂದರು.
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಸಿಬ್ಬಂದಿ ಮೇಲೆ ನಿಗಾ ವಹಿಸಬೇಕು. ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಬೇರೆಡೆಗೆ ಕಳುಹಿಸಲು ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ್ ನವೀನ್ಕುಮಾರ್ ಅವರಿಗೆ ಸೂಚಿಸಿದರು.
ಫಾರಂ ೫೭ರಲ್ಲಿ ಅರ್ಜಿ ಸಲ್ಲಿಸಿ ೪ ವರ್ಷ ಕಳೆದಿದೆ. ಅಕ್ರಮ ಸಕ್ರಮ ಸಮಿತಿಯ ಸಭೆಯಲ್ಲೂ ವಿಲೇವಾರಿಯಾಗಿದೆ. ನಮ್ಮೊಂದಿಗೆ ಅರ್ಜಿ ಸಲ್ಲಿಸಿದ ಇತರರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ ನಮಗೆ ಈವರೆಗೆ ಸಾಗುವಳಿ ಚೀಟಿ ನೀಡಿಲ್ಲ ಎಂದು ಊರುಗುತ್ತಿ ಗ್ರಾಮದ ಹೇಮಕುಮಾರ್ ದೂರು ಸಲ್ಲಿಸಿದರು.
ನಾವುಗಳು ಗದ್ದೆಗೆ ತೆರಳುವ ದಾರಿಗೆ ತಡೆಯೊಡ್ಡಲಾಗಿದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರವಾಗಿ ಬಂದಿದೆ. ಆದರೂ ನಮಗೆ ದಾರಿ ಬಿಟ್ಟುಕೊಟ್ಟಿಲ್ಲ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಲ್ತರೆಶೆಟ್ಟಳ್ಳಿಯ ಗುರಪ್ಪ ದೂರಿದರು.
ಕೊಡ್ಲಿಪೇಟೆ ಭಾಗದಲ್ಲಿ ಇಟ್ಟಿಗೆ ತಯಾರಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಹೇಮಾವತಿ ನದಿಯ ಆಸುಪಾಸಿನಲ್ಲಿ ಯಥೇಚ್ಛವಾಗಿ ಮಣ್ಣು ತೆಗೆಯಲಾಗುತ್ತಿದೆ. ಇದು ಕಣ್ಣಿಗೆ ಕಾಣುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಕೊಡ್ಲಿಪೇಟೆಯ ತೇಜಕುಮಾರ್ ಆರೋಪಿಸಿದರು.
ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಡಿವೈಎಸ್ಪಿ ಅವರು, ದೂರುಗಳ ಬಗ್ಗೆ ಇಲಾಖಾ ಮಟ್ಟದಲ್ಲಿ ವಿಚಾರಣೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಠಾಣೆಗಳಲ್ಲಿ ದೂರು ಸಲ್ಲಿಕೆಯಾದ ತಕ್ಷಣ ಎದುರುದಾರರನ್ನು ಕರೆಸಿ ವಿಚಾರಣೆ ನಡೆಸಬೇಕು. ದೂರುಗಳನ್ನು ಇಟ್ಟುಕೊಂಡು ಕಾಲಹರಣ ಮಾಡಬಾರದು ಎಂದು ಪೊಲೀಸ್ ಠಾಣಾಧಿಕಾರಿ ರಮೇಶ್ಕುಮಾರ್ ಅವರಿಗೆ ಡಿವೈಎಸ್ಪಿ ಪವನ್ಕುಮಾರ್ ಸೂಚಿಸಿದರು.
ಲೋಕಾಯುಕ್ತ ಇನ್ಸ್ ಪೆಕ್ಟರ್ ಲೋಕೇಶ್, ತಹಶೀಲ್ದಾರ್ ನವೀನ್ಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟು ೭ ಅರ್ಜಿಗಳು ಸಭೆಯಲ್ಲಿ ಸ್ವೀಕೃತಗೊಂಡವು.
ಚಿತ್ರ೧೨ಎಸ್ಪಿಟಿ೦೩: ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ
********