ಮೈಚಾಂಗ್ ಚಂಡಮಾರುತವು ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಿಂದ ಭಾರಿ ಹಾನಿಯನ್ನುಂಟುಮಾಡುತ್ತಿದೆ. ತೀವ್ರ ಚಂಡಮಾರುತದಿಂದ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಲ ದಿನಗಳ ಹಿಂದೆ ಕರಪಾಕ್ಕಂನಲ್ಲಿ ಸಿಲುಕಿದ್ದ ನಟ ವಿಷ್ಣು ವಿಶಾಲ್ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ರಕ್ಷಿಸಿತ್ತು. ವಿಷ್ಣು ವಿಶಾಲ್ ಅವರನ್ನು ರಕ್ಷಿಸುವ ಸಮಯದಲ್ಲಿ ಆಮೀರ್ ಖಾನ್ ಕೂಡ ಚಂಡಮಾರುತದ ಸುಳಿಗೆ ಸಿಲುಕಿದ್ದರು ಎನ್ನುವ ವಿಷಯ ಬಹಿರಂಗಗೊಂಡಿತ್ತು. ವಿಷ್ಣು ವಿಶಾಲ್ ಅವರು ತಮ್ಮ ರಕ್ಷಣಾ ಕಾರ್ಯಾಚರಣೆಯ ಫೋಟೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ನಟ ಅಮೀರ್ ಖಾನ್ ಅವರೂ ಇದ್ದರು.
ಇದೀಗ ಈ ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ಚೆನ್ನೈನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಹಲವು ಜನರನ್ನು ಇದಾಗಲೇ ಸ್ಥಳಾಂತರ ಮಾಡಲಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಈ ಪ್ರವಾಹದಲ್ಲಿ ನಟ ರಜನಿಕಾಂತ್ ಅವರ ಮನೆಗೂ ಹಾನಿಯಾಗಿದೆ ಎಂದು ವರದಿಯಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ರಜನಿಕಾಂತ್ ಅವರ ಮನೆಗೆ ನೀರು ನುಗ್ಗಿದೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಸ್ತೆಯ ಮೇಲೆ ಜಲಾವೃತವಾಗಿದ್ದು, ರಜನೀಕಾಂತ್ ಅವರ ಮನೆಯ ಎದುರು ಕೂಡ ನೀರು ನಿಂತಿದೆ. ಆದರೆ ಅದೃಷ್ಟವಶಾತ್ ಈ ಸಮಯದಲ್ಲಿ ರಜನಿಕಾಂತ್ ಮತ್ತು ಅವರ ಕುಟುಂಬ ಚೆನ್ನೈನಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರ ಅಭಿಮಾನಿಯೊಬ್ಬರ ಪ್ರಕಾರ ರಜನೀಕಾಂತ್ ಅವರು, ತಲೈವರ್ 170 ಚಿತ್ರದ ಶೂಟಿಂಗ್ ಕೆಲಸಗಳ ಕಾರಣದಿಂದ ಹೊರಗೆ ಹೋಗಿದ್ದಾರೆ. ತಲೈವರ್ 170 ಬಿಡುಗಡೆಗೆ ಕಾಯುತ್ತಿರುವ ಫ್ಯಾನ್ಸ್, ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.