- ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ
ಪ್ರತಿನಿಧಿ ವರದಿ ಮಡಿಕೇರಿ
ವೈಜ್ಞಾನಿಕ ಕ್ರಮದಿಂದ ಮಾತ್ರ ಕಾಡಾನೆ ನುಸುಳುವುದನ್ನು ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಕಾಡಾನೆಗಳ ಉಪಟಳ ನಿಯಂತ್ರಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಸೋಲಾರ್ ತಂತಿಬೇಲಿ ಅಳವಡಿಸುವುದು, ಟ್ರಂಚ್ಗಳ ನಿರ್ಮಾಣ, ರೈಲ್ವೆ ಬ್ಯಾರಿಕೇಡ್ ಹೀಗೆ ಹಲವು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಕೊಡಗು ವನ್ಯಜೀವಿ ಸಂಸ್ಥೆಯ ಮಾಜಿ ಅಧ್ಯಕ್ಷ ಕರ್ನಲ್ (ನಿ) ಸಿ.ಪಿ.ಮುತ್ತಣ್ಣ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಚಲನವಲನಗಳ ಬಗ್ಗೆ ದಿನನಿತ್ಯ ಗಮನಹರಿಸಿ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು. ಕೃಷಿಬೆಳೆ ಸಂರಕ್ಷಿಸುವಲ್ಲಿ ಅಗತ್ಯ ಕ್ರಮವಹಿಸಬೇಕಿದೆ. ಸ್ಥಳೀಯರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವುದು, ತೊಂದರೆ ನೀಡುವ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ವನ್ಯಪ್ರಾಣಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಹಾಡಿಗಳಲ್ಲಿ ಶೌಚಗೃಹ ನಿರ್ಮಾಣದಂತ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.
ನಾಗರಹೊಳೆ-ಬ್ರಹ್ಮಗಿರಿ ವ್ಯಾಪ್ತಿಯ ಕುಟ್ಟ ಸಮೀಪ ಆನೆ ಕಾರಿಡಾರ್ ನಿರ್ಮಿಸಿದಲ್ಲಿ ನಾಡಿಗೆ ಬರುವ ಕಾಡಾನೆಗಳನ್ನು ತಡೆಯಬಹುದಾಗಿದೆ. ವಯಸ್ಸಾದ ಹಾಗೂ ಗಾಯಗೊಂಡಿರುವ ಹುಲಿಗಳನ್ನು ಗುರುತಿಸಿ ಅಂತಹ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸುವಂತಾಗಬೇಕು. ಇದರಿಂದ ಜನ-ಜಾನುವಾರುಗಳ ರಕ್ಷಣೆ ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.
ವನ್ಯಪ್ರೇಮಿ ಸಂಜಯ್ ಗುಬ್ಬಿ ಮಾತನಾಡಿ, ವನ್ಯ ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವು ಅತೀ ಮುಖ್ಯ. ಆನೆಗಳು 200 ಕಿ.ಮೀ.ವರೆಗೆ ಸಂಚಾರ ಮಾಡುತ್ತವೆ ಎಂದು ಮಾಹಿತಿ ನೀಡಿದರು.
ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಮಾತನಾಡಿ, ಕಾಡಾನೆ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇದ್ದರು.
ಫೋಟೋ 16 ಎಂಡಿಕೆ 01 ; ಕಾಡಾನೆಗಳ ಉಪಟಳ ನಿಯಂತ್ರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸ ಸಭೆ .