ಮಂಡ್ಯ, ನವೆಂಬರ್ 22, 2024: ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿ ವಿವಾದದ ಕುರಿತು ಮಾಜಿ ಸಂಸದೆ ಸುಮಲತ ಅಂಬರೀಶ್ ಕಿಡಿಕಾರಿದ್ದಾರೆ. ಬಿಜೆಪಿ ಜನರಿಗೆ ತಿಳುವಳಿಕೆ ಕೊಡುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಇಂದು ಮಾತನಾಡಿದ ಮಾಜಿ ಸಂಸದೆ ಸುಮಲತಾ ಅಂಬರೀಶ್ ‘ವಕ್ಫ್ ಆಸ್ತಿ ವಿವಾದ ಗಂಭೀರವಾದ ವಿಷಯವಾಗಿದೆ. ಜನರಿಗೆ ಆ ಕುರಿತು ತಿಳುವಳಿಕೆ ಕೊಡುವ ಕೆಲಸವನ್ನ ಬಿಜೆಪಿ ಮಾಡ್ತಿದೆ. ಪ್ರತಿಭಟನೆ ಮಾಡುವ ಮೂಲಕ ಸಂದೇಶ ನೀಡ್ತಿದೆ. ದೇಶವನ್ನ 50-60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಅವರ ಅವಧಿಯಲ್ಲಿಯೆ ಈ ಕಾಯ್ದೆಗಳು ಬಂದಿರೋದು. ಜನ ಸಾಮಾನ್ಯರಿಗೆ ಇವಾಗ ಅದರ ತಿಳುವಳಿಕೆ ಬರ್ತಾ ಇದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಮಾಜಿ ಸಂಸದೆ ‘ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕಿತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆದರೆ ರೈತರ, ದೇವಸ್ಥಾನ ಜಾಗವನ್ನ ವಕ್ಫ್ ಆಸ್ತಿ ಎಂದು ಕ್ಲೈಮ್ ಮಾಡ್ತಿದ್ದಾರೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾ? ಎಂದು ಪ್ರಶ್ನಿಸಿದರು. ಬಾಂಗ್ಲಾದಲ್ಲಿ ಏನೇನು ಆಗ್ತಿದೆ ಎಂದು ಕಣ್ಣು ಮುಂದೆ ಕಾಣ್ತಿದೆ. ಆ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್ ಹೊರಟಿದ್ಯಾ ಎಂದು ಸುಮಲತಾ ಕಿಡಿಕಾಡಿದರು.
