ಪ್ರತಿನಿಧಿ ವರದಿ ಸಕಲೇಶಪುರ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಪಟ್ಟಣದ ಅಜಾದ ರಸ್ತೆಯಲ್ಲಿ ನಡೆಯಿತು.
ಆನೆ ಮಹಲ್ ಗ್ರಾಪಂ ಮಾಜಿ ಅಧ್ಯಕ್ಷ ಅಶ್ರಫ್ ಮಾತನಾಡಿ, ಎಸ್ ಡಿಪಿಐ ಪಕ್ಷದ ಯಶಸ್ಸನ್ನು ಸಹಿಸಲಾಗದ ಕೆಲವರು ನಮ್ಮ ಪಕ್ಷವನ್ನು ಹಿಂದು ವಿರೋಧಿ ಪಕ್ಷವೆಂದು ಹೇಳಿಕೊಂಡು ಪಕ್ಷದ ಮೇಲೆ ಗೂಬೆಕೂರಿಸುತ್ತಿದ್ದಾರೆ. ನಮ್ಮ ಪಕ್ಷವು ಜಾತ್ಯತೀತ ಸಾಮಾಜಿಕ ನ್ಯಾಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಆನೆ ಮಹಲ್ ಗ್ರಾಪಂ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಧಿಕಾರವನ್ನು ಪಡೆದ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಎಸ್ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ ಮಾತನಾಡಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒಂದು ರಾಜಕೀಯ ಪಕ್ಷ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಚಳವಳಿಯಾಗಿ ಸಾಗಿ ಬಂದಿದೆ. ರಾಜಕೀಯ ಪಕ್ಷಗಳು ಕೇವಲ ಚುನಾವಣೆಗಳಿಗೆ ಸೀಮಿತವಾಗಿದ್ದರೆ ನಮ್ಮ ಪಕ್ಷ ಜನರ ಯಾವುದೇ ಸಂಕಷ್ಟಗಳಿಗೆ ಜೊತೆಯಾಗಿ ನಿಲ್ಲುವ ಸಂಗಾತಿಯಾಗಿದೆ. ಅದು ಸಾಂಕ್ರಾಮಿಕ ರೋಗಗಳ ಸಮಯವಾಗಿರಲಿ, ಪ್ರಕೃತಿ ವೈಪರೀತ್ಯಗಳ ಸನ್ನಿವೇಶವಾಗಿರಲಿ ಅಥವಾ ಯಾವುದೇ ದೌರ್ಜನ್ಯ, ದಬ್ಬಾಳಿಕೆಯ ಘಟನೆಯಾಗಿರಲಿ ಎಸ್.ಡಿ.ಪಿ.ಐ ಎಲ್ಲರಿಗಿಂತ ಮೊದಲು ಸಂತ್ರಸ್ತರ ನೆರವಿಗೆ ಧಾವಿಸಿರುತ್ತದೆ. ಜನರಪರ ಹೋರಾಟಗಳ ಮೂಲಕವೇ ಜನರ ಪರವಾಗಿ ಅಧಿಕಾರ ಹಿಡಿಯಬೇಕು ಮತ್ತು ಆ ಮೂಲಕ ಹಸಿವು ಮುಕ್ತ, ಭಯ ಮುಕ್ತ ಸಮಾಜವನ್ನು ನಿರ್ಮಿಸಬೇಕೆಂಬ ಧ್ಯೇಯದೊಂದಿಗೆ ಮುನ್ನುಗ್ಗುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಜಿದ್ ಪಾಷಾ, ಹೈದರ್ ಆನೆಮಹಲ್, ಇಸಾಕ್ ಕಾಡ್ಲೂರ್ ಇನ್ನಿತರರು ಇದ್ದರು.