ಹುಣಸೂರು: ಜೀತವಿಮುಕ್ತರು ಬೆಂಕಿಯಿದ ಬಾಣಲೆಗೆ ಬಿದ್ದಿದ್ದಾರೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಬೇಸರಿಸಿದರು.
ತಾಲೂಕು ಪಂಚಾಯಿತಿ ವತಿಯಿಂದ ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೀತವಿಮುಕ್ತರ ಪುನರ್ವಸತಿ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ೨೦೧೪ ರಿಂದ ಈವರೆಗೆ ೨೪ ಮಂದಿಯನ್ನು ಜೀತಗಾರಿಕೆಯಿಂದ ಬಿಡುಗಡೆಗೊಳಿಸಲಾಗಿದ್ದು, ಈ ೨೪ ಮಂದಿ ಜೀತವಿಮುಕ್ತರಿಗೆ ಯಾವುದೇ ಸೌಲಭ್ಯಗಳನ್ನು ಇಲ್ಲಿಯವರೆಗೆ ಕಲ್ಪಿಸಿಕೊಡಲಾಗಿಲ್ಲ. ಕೇವಲ ಸಭೆಗಳಲ್ಲಿ ಮಾತ್ರ ಅಧಿಕಾರಿಗಳು ಜೀತವಿಮುಕ್ತರ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಚ್ಛಾಶಕ್ತಿಯಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿಲ್ಲ. ಕೆಲವರಿಗೆ ನಿವೇಶನ, ವಾಸಿಸಲು ಮನೆ ಎರಡೂ ಇಲ್ಲ. ಇಂತಹವರಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾಸಿಸಲು ನೆಲೆಗಳನ್ನು ಕಲ್ಪಿಸದೆ ಇಲ್ಲಸಲ್ಲದ ನೆಪಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಅಂತಹ ಪಿ.ಡಿ.ಓ ಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ಅಂಬೇಡ್ಕರ್ ನಿಗಮ, ಇತರೆ ನಿಗಮಗಳ ವತಿಯಿಂದ ಜೀತ ವಿಮುಕ್ತರಿಗೆ ವಿಶೇಷವಾಗಿ ನೇರ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪದೇ ಪದೇ ಆಗ್ರಹಿಸುತ್ತಲೇ ಬಂದಿದ್ದೇವೆ ಎಂದು ಬೇಸರಿಸಿದರು.
ಜೀತದಿಂದ ವಿಮುಕ್ತಿ ಹೊಂದಿದ ವ್ಯಕ್ತಿ ಇನ್ನಾದರೂ ಸ್ವಾವಲಂಬಿ ಬದುಕು ನಡೆಸಲು ಮುಂದಾದರೆ ವ್ಯವಸ್ಥೆ ಇಂತಹ ಪರಿಸ್ಥಿತಿಯನ್ನು ತಂದೊಡ್ಡಿದ್ದು, ಜೀತವಿಮುಕ್ತರು ಬಾಣಲೆಯಿಂದ ಬೆಂಕಿಗೆ ಬಿದ್ದು ಸುಟ್ಟುಹೋಗುತ್ತಿದ್ದಾರೆ. ತಾಲೂಕು ಆಡಳಿತ ಎಚ್ಚರಗೊಂಡು ಜೀತವಿಮುಕ್ತ ಬದುಕು ಹಸನಗೊಳಿಸಬೇಕೆಂದು ಒತ್ತಾಯಿಸಿದರು.
ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್ ಮಾತನಾಡಿ, ಜೀತಗಾರಿಕೆ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು, ಸಮುದಾಯದ ಮುಖಂಡರುಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನಿರ್ಬಂಧ ಹಾಕಿ ಒಂದೇ ಕಡೆ ದುಡಿಸಿಕೊಂಡು ಅವರ ಹಕ್ಕುಗಳನ್ನು ಉಲ್ಲಂಘನೆ ಮಾಡುವ ಯಾವುದೇ ವ್ಯಕ್ತಿಗಳನ್ನು ಗುರುತಿಸಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಹುಣಸೂರು ತಾಲ್ಲೂಕಿನಲ್ಲಿ ೨೪ ಮಂದಿ ಜೀತಗಾರಿಕೆಯಿಂದ ಬಿಡುಗಡೆ ಹೊಂದಿದ್ದು, ಇವರಿಗೆ ಬೇಕಾದ ಮೂಲ ಸೌಲಭ್ಯಗಳಾದ ವಾಸಿಸಲು ಮನೆ, ವಿವಿಧ ನಿಗಮ ಮಂಡಳಿಗಳಲ್ಲಿ ಸಾಲ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಯೋಜನಾಧಿಕಾರಿ ರಾಜೇಶ್, ಪಿಡಿಒಗಳಾದ ಮಂಜುಳಾ, ಕವಿತ, ಪ್ರತಿಭಾ, ಗಿರಿಜ, ಪ್ರೇಮಚಂದ್, ತಾ.ಪಂ. ವಿಷಯ ಕಾರ್ಯನಿರ್ವಾಹಕರಾದ ನಟೇಶ್, ಸುನೀಲ್, ಬಾಲಾಜಿರಾವ್, ಸಿಬ್ಬಂದಿ ಕುಮಾರ್, ಅರುಣ್, ವಿಜಯಕುಮಾರ್, ವಾಲ್ಮೀಕಿ ಅಭಿವೃದ್ದಿ ನಿಗಮದ ಪರಮೇಶ್ವರಪ್ಪ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್, ಪಶುಪಾಲನೆ ಮತ್ತು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ: ಚನ್ನಬಸಪ್ಪ ಜೀತಗಾರಿಕೆಯಿಂದ ಬಿಡುಗಡೆಗೊಂಡ ಜೀತವಿಮುಕ್ತರು ಈ ಸಭೆಯಲ್ಲಿ ಹಾಜರಿದ್ದರು.
೧೭ಊUಓ೧: ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೀತವಿಮುಕ್ತರ ಪುನರ್ವಸತಿ ಮತ್ತು ಜಾಗೃತಿ ಕಾರ್ಯಾಗಾರವನ್ನು ತಾ.ಪಂ.ಇಒ ಶಿವಕುಮಾರ್ ಉದ್ಘಾಟಿಸಿ ಮಾತನಾಡಿದರು. ನಿಂಗರಾಜ ಮಲ್ಲಾಡಿ, ರಾಜೇಶ್, ಪರಮೇಶ್ವರಪ್ಪ ಇದ್ದಾರೆ.