ಬೆಂಗಳೂರು, ಜ.18: ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆಯಲಿರುವ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ ಗುರುವಾರದಿಂದ (ಜ.18) ಆರಂಭವಾಗಲಿದೆ. ಗಾಜಿನ ಮನೆಯಲ್ಲಿ ಜ.18ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸುವರು. ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿರುವರು.
ಈ ಬಾರಿ ಸುಮಾರು 68 ವಿಧದ 32 ಲಕ್ಷ ಹೂಗಳನ್ನು ಬಳಸಿ ಅನುಭವ ಮಂಟಪ, ಐಕ್ಯ ಮಂಟಪ ಇತ್ಯಾದಿಗಳನ್ನು ನಿರ್ಮಿಸಲಾಗಿದೆ. ಅಂದಾಜು ₹2.85 ಕೋಟಿ ಖರ್ಚು ಮಾಡಲಾಗುತ್ತಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ 10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ. ಜ.18ರಿಂದ 28ರವರೆಗೆ ಪ್ರದರ್ಶನ ನಡೆಯಲಿದೆ.
ಪ್ರವೇಶ ಶುಲ್ಕ: ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ ₹80, ರಜಾ ದಿನಗಳಲ್ಲಿ ₹100, 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ ₹30 ನಿಗದಿ ಮಾಡಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಬರುವ ಒಂದರಿಂದ 10ನೇ ತರಗತಿ ಮಕ್ಕಳಿಗೆ ರಜಾ ದಿನ ಹೊರತು ಪಡಿಸಿ ಉಚಿತ ಪ್ರವೇಶವಿರುತ್ತದೆ.
ಪಾರ್ಕಿಂಗ್ ವ್ಯವಸ್ಥೆ: ಶಾಂತಿನಗರ ಬಸ್ ನಿಲ್ದಾಣ ಬಳಿ ಇರುವ ಬಹುಮಹಡಿ ಕಟ್ಟಡ, ಹಾಪ್ ಕಾಮ್ಸ್ ಆವರಣ, ಜೆಸಿ ರಸ್ತೆಯಲ್ಲಿರುವ ಪಾಲಿಕೆಯ ಬಹುಮಹಡಿ ಕಟ್ಟಡಗಳಲ್ಲಿ ಕಾರುಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಅಲ್ ಅಮೀನ್ ಕಾಲೇಜು ಅವರಣದ ನಿಲ್ದಾಣ ಪ್ರದೇಶದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.