ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಂತ್ರಸ್ತೆಯರಿಗೆ ಬೆದರಿಕೆ ಕರೆಗಳು ಬರುತ್ತಿದ್ದರೆ ಅಥವಾ ಅವರನ್ನು ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನ ನಡೆಯುತ್ತಿದ್ದರೆ ಅವರು ಎಸ್ಐಟಿ ಗಮನಕ್ಕೆ ತರಬೇಕು ಇಲ್ಲವೇ ರಾಷ್ಟ್ರೀಯ ಮಹಿಳಾ ಅಯೋಗಕ್ಕೆ ದೂರು ಸಲ್ಲಿಸಬೇಕೆಂದು ಹೇಳಿದರು. ಒಕ್ಕಲಿಗ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಎಸ್ಐಟಿ ತನಿಖೆ ಬಗ್ಗೆ ಪುನಃ ಪ್ರಶ್ನೆ ಕೇಳಿದಾಗ ತಾಳ್ಮೆ ಕಳೆದುಕೊಂಡ ಪ್ರಮೇಶ್ವರ್, ಪ್ರೋಸೀಜರ್ ಪ್ರಕಾರ ಮಾಡಬೇಕಿರುವುದನ್ನೆಲ್ಲ ಅವರು ಮಾಡುತ್ತಾರೆ. ಅವರ ದಿನವಹಿ ತನಿಖೆಯನ್ನೆಲ್ಲ ಮಾದ್ಯಮದವರಿಗೆ ಹೇಳುತ್ತಾ ಕೂರಲಾಗಲ್ಲ ಎಂದು ಹೇಳಿದರು. ದೇವರಾಜೇಗೌಡ ವಿರುದ್ಧ ಎಫ್ಐಆರ್ ಆಗಿರುವ ವಿಚಾರದಲ್ಲೂ ಗೃಹ ಸಚಿವ ಸಮಾಧಾನದಿಂದ ಉತ್ತರ ನೀಡಲಿಲ್ಲ. ಅದನ್ನೆಲ್ಲ ಎಸ್ಐಟಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದಷ್ಟೇ ಎಂದರು. ಮೊದಲೆಲ್ಲ ಪ್ರಜ್ವಲ್ ರೇವಣ್ಣ ಮತ್ತು ಹೆಚ್ ಡಿ ರೇವಣ್ಣ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರಿಸುತ್ತಿದ್ದ ಗೃಹ ಸಚಿವ ನಿನ್ನೆಯಿಂದ ಕೊಂಚ ಅಸಹನೆ ಪ್ರದರ್ಶಿಸುತ್ತಿದ್ದಾರೆ.