ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಅರಮನೆ ನಗರಿ ನಿನ್ನೆ(ಆ.೨೧) ಯಿಂದ ಕಳೆಗಟ್ಟಿದೆ. ಮೈಸೂರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ದಸರಾ ಗಜಪಡೆ, ನಿನ್ನೆಯಷ್ಟೇ ನಾಗರಹೊಳೆ ಅಭಯಾರಣ್ಯದ ಅಂಚಿನಿಂದ ಮೈಸೂರಿನೆಡೆಗೆ ಪಯಣ ಬೆಳೆಸಿತ್ತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ನಿನ್ನೆ ವಿದ್ಯುಕ್ತ ಚಾಲನೆ ನೀಡಲಾಗಿತ್ತು. ಕಾಡಿನಿಂದ ನಾಡಿನತ್ತ ಹೊರಟಿದ್ದ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಅರಮನೆ ನಗರಿಗೆ ಎಂಟ್ರಿ ಕೊಟ್ಟಿದ್ದು, ಸದ್ಯ ಅರಣ್ಯ ಭವನದ ಆವರಣದಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿ ಇವೆ.
ಅಭಿಮನ್ಯು ನೇತೃತ್ವದ ೯ ಆನೆಗಳು ಅರಮನೆ ನಗರಿಗೆ ಆಗಮಿಸಿದ್ದು, ಅಶೋಕಪುರಂ ನ ಅರಣ್ಯಭವನದಲ್ಲಿ ಬೀಡು ಬಿಟ್ಟಿವೆ. ಸದ್ಯ ರಿಲ್ಯಾಕ್ಸ್ ಮೂಡಿನಲ್ಲಿರುವ ಅಭಿಮನ್ಯು & ಟೀಂ, ಅರಣ್ಯ ಭವನದಲ್ಲಿ ಮಜ್ಜನ ಮಾಡಿ ವಿಶ್ರಾಂತಿ ಪಡೆಯುತ್ತಿವೆ. ಇಂದು ದಸರಾ ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತರು, ಕಾವಾಡಿಗಳು ಮಜ್ಜನದ ಬಳಿಕ ಅರಣ್ಯ ಭವನದ ಆವರಣದಲ್ಲಿಆನೆಗಳಿಗೆ ವಾಕಿಂಗ್ ಮಾಡಿಸಿದ್ದಾರೆ. ಇನ್ನು ಆನೆಗಳನ್ನು ವೀಕ್ಷಿಸಲು ತಂಡೋಪತಂಡವಾಗಿ ಅರಣ್ಯ ಭವನದ ಬಳಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ನಿನ್ನೆಯಿಂದ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ಆನೆಗಳು ಇಂದು ಕೂಡ ಅಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ(ಆ.23) ಅರಮನೆಗೆ ಸಾಂಪ್ರದಾಯಿಕವಾಗಿ ಆಗಮಿಸಲಿವೆ. ಅರಮನೆ ಸಂಪ್ರದಾಯದಂತೆ ನಾಳೆ ಆನೆಗಳನ್ನು ಅಂಬಾವಿಲಾಸ ಅರಮನೆಗೆ ಬರಮಾಡಿಕೊಳ್ಳಲಿದೆ. ನಾಳೆಯಿಂದ 2 ತಿಂಗಳು ಆನೆಗಳು, ಮಾವುತರು, ಕಾವಾಡಿ ಕುಟುಂಬಗಳು ಅರಮನೆಯಲ್ಲಿಯೇ ವಾಸ್ತವ್ಯ ಹೂಡಲಿದೆ.