ಚಾಮರಾಜನಗರದ ವಿದ್ಯಾಗಣಪತಿ ಮಂಡಳಿ ಈ ವರ್ಷವೂ ಸಹ ಸರ್ಕಾರದ ಮಾರ್ಗಸೂಚಿಯಂತೆ ಆಚರಣೆ
ಪ್ರತಿನಿಧಿ ವರದಿ ಚಾಮರಾಜನಗರ
70ರ ದಶಕದಲ್ಲಿ ಮೆರವಣಿಗೆ ವಿಚಾರದಲ್ಲಿ ಕೋಮು ಸಂಘರ್ಷ ಸಂಭವಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು ಆ ಗಣೇಶೋತ್ಸವ. ಲೋಕಸಭೆಯಲ್ಲೂ ಚರ್ಚೆಗೆ ವಿಷಯವಾಗಿತ್ತು ಇಲ್ಲಿನ ಗಣೇಶೋತ್ಸವ.
ಪ್ರತಿ ವರ್ಷ ಒಂದಲ್ಲಾ ಒಂದು ವೈವಿದ್ಯಮಯ ಗಣಪತಿ ಪ್ರತಿಷ್ಠಾಪನೆಗೆ ಹೆಸರುವಾಸಿಯಾಗಿತ್ತು ಶ್ರೀವಿದ್ಯಾಗಣಪತಿ ಮಂಡಳಿ. ಅದರೆಂತೆ ಈ ಬಾರಿಯೂ ಸರ್ಕಾರದ ಷರತ್ತು ಬದ್ದ ಅನುಮತಿಯಂತೆ ಕೈಯಲ್ಲಿ ಬಿಲ್ಲು ಹಾಗೂ ತ್ರಿಶೂಲವನ್ನು ಹಿಡಿದ ಅಯೋಧ್ಯ ರಾಮನ ಪ್ರತಿರೂಪದ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಿದೆ.
ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ಒಂದು ತಿಂಗಳ ಕಾಲ ಗಣೇಶೋತ್ಸವ ಆಚರಿಸುತ್ತಿದ್ದ ವಿದ್ಯಾಗಣಪತಿ ಮಂಡಳಿ ಈ ವರ್ಷವೂ ಸಹ ಸರ್ಕಾರದ ಮಾರ್ಗಸೂಚಿ ಆಚರಣೆಗೆ ಮುಂದಾಗಿದೆ.
ಚಾಮರಾಜನಗರದ ರಥದ ಬೀದಿಯಲ್ಲಿ ಸುಮಾರು ಏಳು ಅಡಿ ಎತ್ತರದ ಕೈಯಲ್ಲಿ ಬಿಲ್ಲು ಹಾಗೂ ತ್ರಿಶೂಲವನ್ನು ಹಿಡಿದ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿದ್ದು, ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಶನಿವಾರ ಬೆಳಗ್ಗೆ 11.40ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಕೈಯಲ್ಲಿ ಬಿಲ್ಲು ಹಾಗೂ ತ್ರಿಸೂಲವನ್ನು ಹಿಡಿದ ಅಯೋದ್ಯೆಯ ರಾಮನ ಪ್ರತಿರೂಪದ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.
ನಗರದಲ್ಲಿ ಪ್ರತಿ ವರ್ಷ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈವಿಧ್ಯಮಯವಾದ ಬೃಹತ್ ಗಾತ್ರದ ಗಣಪತಿ ಪ್ರತಿಷ್ಠಾಪನೆ ಮಾಡಿ, ಒಂದು ತಿಂಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಈ ಬಾರಿ ಏಳು ಅಡಿ ಎತ್ತರದ ಕೈಯಲ್ಲಿ ಬಿಲ್ಲು ಹಾಗೂ ತ್ರಿಸೂಲವನ್ನು ಹಿಡಿದ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿ ಮೂರ್ತಿಯನ್ನು ಪ್ರತಿಷ್ಠಪಿಸಲಾಗಿದೆ ಎಂದು ಶ್ರೀವಿದ್ಯಾಗಣಪತಿ ಮಂಡಳಿಯ ಮುಖಂಡರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ ಜಿಲ್ಲೆಯ ಜಿಲ್ಲೆಯ ಜನರಿಗೆ ಗೌರಿ,ಗಣೇಶ ಹಬ್ಬದ ಶುಭಾಶಯ ಕೋರಿದರು.
ಗಣೇಶೋತ್ಸವದ ಇತಿಹಾಸ : ಪ್ರತಿವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ವಿದ್ಯಾಗಣಪತಿ ಮಂಡಳಿಗೆ 62 ವರ್ಷಗಳ ಇತಿಹಾಸವಿದೆ. 1962 ರಿಂದಲೂ ನಗರದ ರಥದ ಬೀದಿಯಲ್ಲಿ ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಗಣೇಶೋತ್ಸವವನ್ನು ನೆರವೇರಿಸಿಕೊಂಡು ಬರುತ್ತಿದೆ.
70ರ ದಶಕದಲ್ಲಿ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ವಿವಾದ ಉಂಟಾಗಿ, ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಅದು ಸುಪ್ರೀಂಕೋರ್ಟ್ ವರೆಗೆ ತಲುಪಿ, ಕೊನೆಗೆ ತೀರ್ಪು ಮಂಡಳಿ ಪರವಾಗಿಯೇ ಬಂತು. ಬಳಿಕ ನಡೆದ ವಿಸರ್ಜನಾ ಮಹೋತ್ಸವದ ವೇಳೆ ಕೋಮು ಘರ್ಷಣೆ ಕೂಡ ಸಂಭವಿಸಿತ್ತು. ಅಲ್ಲದೇ 90ರ ದಶಕದಲ್ಲೂ ಒಂದೆರಡು ಬಾರಿ ಇಂತಹ ಘರ್ಷಣೆ ನಡೆದು ಕರ್ಫ್ಯೂ ಜಾರಿಯಾಗಿ ಗಣಪತಿ ಮೆರವಣಿಗೆ ಅರ್ಧದಲ್ಲೆ ನಿಂತು ಹೋಗಿತ್ತು.
ಜತೆಗೆ ಲೋಕಸಬೆಯಲ್ಲಿಯೂ ಚಾಮರಾಜನಗರ ಗಣಪತಿ ಮೆರವಣಿಗೆ ವಿಚಾರ ಪ್ರಸ್ತಾಪವಾಗಿತ್ತು. ಅಂದು ಲೋಕಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಗಣಪತಿ ಮೆರವಣಿಗೆ ನಡೆಯಬೇಕು ಎಂದು ಚೆರ್ಚೆ ಮಾಡಿದ್ದರು. ಅರ್ಧದಲ್ಲೆ ನಿಂತು ಹೋಗಿದ್ದ ಗಣಪತಿ ಮೆರವಣಿಗೆನ್ನು ಪೊಲೀಸರೇ ಸೇರಿಕೊಂಡು ಮುನ್ನಡೆಸಿ ಗಣಪತಿ ವಿಸರ್ಜನೆ ಮಾಡಿದ್ದರು. ಅಂದಿನಿಂದ ಇದಕ್ಕೆ ಪೊಲೀಸ್ ಗಣಪತಿ ಎಂಬ ಹೆಸರು ಸಹ ಬಂತು. ಅಂದಿನಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಗಣೇಶೋತ್ಸವಕ್ಕೆ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಂಡು ಬರಲಾಗುತ್ತಿದೆ. ವಿಸರ್ಜನಾ ಮಹೋತ್ಸವವಂತೂ ಪೊಲೀಸ್ ಸರ್ಪಗಾವಲಿನಲ್ಲೆ ನಡೆದುಕೊಂಡು ಬರುತ್ತಿದೆ.
8ಸಿಎಚ್ಎನ್.2: ಚಾಮರಾಜನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಏಳು ಅಡಿ ಎತ್ತರದ ಕೈಯಲ್ಲಿ ಬಿಲ್ಲು ಹಾಗೂ ತ್ರಿಸೂಲವನ್ನು ಹಿಡಿದ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ.ಕವಿತಾ, ಎಡಿಸಿ ಗೀತಾಹುಡೇದ,ಮಂಡಳಿಯ ಸದಸ್ಯರು ಇದ್ದರು.