ಕೆ.ಆರ್.ನಗರದಲ್ಲಿ ಹಿಂದು, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಪ್ರತಿನಿಧಿ ವರದಿ ಕೆ.ಆರ್.ನಗರ
ಅನುಮಾನಸ್ಪದವಾಗಿ ಸಾವಿಗೀಡಾದ ತಾಲೂಕಿನ ಬಾಲೂರು ಒಂಟಿಮನೆ ಗ್ರಾಮದ ಪುನೀತ್ ಸಾವಿಗೆ ಕಾರಣರಾಗಿರುವ ಆರೋಪಿಗಳು ಈ ಕೂಡಲೇ ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಮತ್ತು ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಆದಿಶಕ್ತಿ ತೋಪಮ್ಮ ದೇವಸ್ಥಾನದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ನಂತರ ಮೆರವಣಿಗೆಯ ಮೂಲಕ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ವಿವಿಧ ಘೋಷಣೆಗಳನ್ನು ಕೂಗುತ್ತ ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ತಾಲೂಕು ಸೌಧಕ್ಕೆ ತೆರಳಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳದ ಮೈಸೂರು ಗ್ರಾಮಾಂತರ ಸಂಯೋಜಕ ಚಂದ್ರಮೌಳಿ, ಬಾಲೂರು ಒಂಟಿಮನೆ ಗ್ರಾಮದಲ್ಲಿ ವಾಸವಾಗಿದ್ದ ಅಮಾಯಕ ಹಿಂದು ಯುವಕ ಪುನೀತ್ ಮಾ.13 ರಂದು ತಮ್ಮ ಮನೆಯ ಹಿಂಭಾಗದ ಜಮೀನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಇದು ಪಟ್ಟಣದ ಮುಸ್ಲಿಂ ಬಡಾವಣೆಯ ಯುವಕರ ಗುಂಪು ಮಾಡಿರುವ ಕೂಲೆ ಎಂದು ಗಂಭೀರ ಆರೋಪಿಸಿದರು.
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಪ್ರತಿ 15 ದಿನಕ್ಕೊಮ್ಮೆ ತನ್ನ ಹುಟ್ಟೂರಿಗೆ ಬಂದು ಹೋಗುತ್ತಿದ್ದ ಪುನೀತ್ ಮೇಲೆ ಕೆಲವು ದಿನಗಳ ಹಿಂದೆ ವಿನಾಕಾರಣ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ 6 ರಿಂದ 8 ಜನ ಮುಸಲ್ಮಾನ ಯುವಕರು ತೀವ್ರವಾಗಿ ಹಲ್ಲೆ ನಡೆಸಿದ್ದರು. ಆ ದೃಶ್ಯಗಳು ಸಿಸಿ ಟಿವಿ ಕ್ಯಾಮಾರದಲ್ಲಿ ದಾಖಲಾಗಿದ್ದು, ಈ ಬಗ್ಗೆ ಪುನೀತನ ಸ್ನೇಹಿತರನ್ನು ವಿಚಾರಿಸಿದಾಗ ಈ ಹಿಂದೆ ಸಹ ಹಲವಾರು ಬಾರಿ ಮುಸಲ್ಮಾನ ಯುವಕರ ಗುಂಪು ಪುನೀತ್ನ ಬೈಕ್ನ್ನು ತಡೆದು ಅಮಾನವೀಯವಾಗಿ ಹಲ್ಲೆ ನಡೆಸಿ ಪುನೀತ ಮತ್ತು ಆತನ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿರುವುದು ತಿಳಿದು ಬಂದಿದೆ ಎಂದರು.
ರಾಜ್ಯದ ಎಲ್ಲೆಡೆ ಹಿಂದು ವಿದ್ಯಾರ್ಥಿಗಳು ಹಾಗೂ ಯುವಕರುಗಳನ್ನೇ ಗುರಿಯಾಗಿಸಿಕೊಂಡು ಮುಸ್ಲಿಮರು ಹಲ್ಲೆ ಮಾಡುವುದು ಕೊಲೆ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ಜರುಗುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ ಜತೆಗೆ ಪೊಲೀಸ್ ಇಲಾಖೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಆದ್ದರಿಂದ ಪುನೀತ್ ಸಾವು ಅಸಹಜವಾಗಿದ್ದು, ಆ ಕೊಲೆಗೆ ಕಾರಣರಾದವರನ್ನು ಬಂಧಿಸಿ ನೊಂದು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೇ ಮುಂದೆ ಜನರು ಅಶಾಂತಿಯ ವಾತಾವರಣಕ್ಕೆ ನೀವು ಕಾರಣ ಎಂದರು.
ಪ್ರತಿಭಟನಾಕಾರರು ಶಿರಸ್ತೇದಾರ್ ಅಸ್ಲಾಂ ಪಾಷಾ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಧರ್ಮ, ಜಿಲ್ಲಾ ಆರ್ಥಿಕ ಪ್ರಕೋಷ್ಟ ಸಹ ಸಂಚಾಲಕರು ಕೃಷ್ಣಯ್ಯ, ಅರೆಕೆರೆ ಮಧು, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ಮೃತನ ತಾಯಿ ಭಾರತಿ, ಹಿಂದುಪರ ಸಂಘಟನೆಗಳ ಪದಾಧಿಕಾರಿಗಳಾದ ಆಂಬುಲೆನ್ಸ್ ಕಿಶೋರ್, ಮಧು ಗದ್ದಿಗೆ, ವಿನಯ್ಶೆಟ್ಟಿ, ಸಂತೋಷ್, ಬಸವರಾಜು ಭಾಗವಹಿಸಿದ್ದರು.
19 ಕೆಆರ್ಎನ್-2,3:- ಕೆ.ಆರ್.ನಗರದಲ್ಲಿ ತಾಲೂಕಿನ ಬಾಲೂರು ಒಂಟಿಮನೆ ಗ್ರಾಮದ ಪುನೀತ್ ಸಾವಿಗೆ ಕಾರಣರಾಗಿರುವ ಆರೋಪಿಗಳು ಈ ಕೊಡಲೆ ಬಂಧಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಮತ್ತು ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ಶಿರಸ್ತೆದಾರ ಅಸ್ಲಾಂ ಪಾಷಾ ಅವರಿಗೆ ಮನವಿ ಸಲ್ಲಿಸಿದರು.