ಪ್ರತಿನಿಧಿ ವರದಿ ಹೊಳೆನರಸೀಪುರ
ಸಂವಿಧಾನದ ಆಶಯಗಳ ಆಧಾರಿತ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿ ಅನುಷ್ಠಾನವಾದರೆ ದೇಶದ ಪ್ರಜಾ ಪ್ರಭುತ್ವ ಸದೃಢವಾಗುತ್ತದೆ. ಅದಕ್ಕಾಗಿ ವಿದ್ಯಾವಂತ ಯುವ ಸಮೂಹ ಹಾಗೂ ಸಾಮಾಜಿಕ ನ್ಯಾಯದ ಚಳವಳಿಗಾರರು ಸಂವಿಧಾನ ಅರಿವು ಮೂಡಿಸಲು ಸನ್ನದ್ಧರಾಗ ಬೇಕೆಂದು ಸಂವಿಧಾನ ಓದು ಅಭಿಯಾನದ ಹಾಸನ ಜಿಲ್ಲಾ ಆಯೋಜಕ ಗೊರೂರು ರಾಜು ಕರೆ ನೀಡಿದರು.
ತಾಲೂಕಿನ ಕಡವಿನಹೊಸಹಳ್ಳಿ ಗ್ರಾಮದ ದಂಡೋರ ಸಮಿತಿಯ ಕೆ.ಎಂ.ನಾಗರಾಜು ಅವರ ಪರಿವರ್ತನಾಲಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಂವಿಧಾನ ಅಧ್ಯಯನ ಶಿಬಿರಕ್ಕೆ ಯುವಕರ ನೋಂದಣಿ ಪ್ರಕ್ರಿಯೆ ಕುರಿತು ಮಾತನಾಡಿದರು.
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದ ನ್ಯಾಯಮೂರ್ತಿ ನಾಗ ಮೋಹನ ದಾಸ್ ಅವರ ತಂಡ ರಾಜ್ಯಾದ್ಯಂತ ಸಂವಿಧಾನ ಓದು ಅಭಿಯಾನ ಆರಂಭಿಸಿದೆ. ಅಭಿಯಾನದ ಅಂಗವಾಗಿ ಹಾಸನದ ಯೂತ್ ಹಾಸ್ಟೆಲ್ ನಲ್ಲಿ ಆ.31 ಹಾಗೂ ಅ.1ರಂದು ಎರಡು ದಿನಗಳ ಕಾಲ ಉಚಿತ ಊಟ ವ್ಯವಸ್ಥೆಯೊಂದಿಗೆ ಸಂವಿಧಾನ ಅಧ್ಯಯನ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಕಾನೂನು ತಜ್ಞರು ಸಂವಿಧಾನ ಹಾಗೂ ಯುವ ಜನತೆಯ ಮುಂದಿನ ಭವಿಷ್ಯ ಕುರಿತು ಉಪನ್ಯಾಸ, ಚರ್ಚೆ, ಸಂವಾದಗಳು ನಡೆಯಲಿದ್ದು, ಪದವೀಧರ ಯುವಕ, ಯುವತಿಯರು, ಚಳವಳಿಗಾರರು ಭಾಗವಹಿಸಲು 50 ರೂ. ಶುಲ್ಕದೊಡನೆ ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು.
ದಂಡೋರ ರಿಜರ್ವೇಶನ್ ಹೋರಾಟ ಸಮಿತಿಯ ಹಾಸನ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್ ಮಾತನಾಡಿ, ಶಿಬಿರದಲ್ಲಿ ಮೊದಲು ನೋಂದಣಿ ಮಾಡಿಕೊಂಡ ನೂರು ಜನ ಶಿಬಿರಾರ್ಥಿಗಳಿಗೆ ಮಾತ್ರ ಪ್ರವೇಶ ದೊರಕುವುದು. ಹೆಚ್ಚಿನ ಮಾಹಿತಿಗಾಗಿ ಗೊರೂರು ರಾಜು ಮೊ. ನಂ.9448427170 ಹಾಗೂ ವಿಜಯಕುಮಾರ್ ಮೊ.ನಂ.9606913011 ಸಂಪರ್ಕಿಸುವಂತೆ ತಿಳಿಸಿದರು.
ದಂಡೋರ ತಾಲೂಕು ಸಮಿತಿಯ ಕೆ.ಎಂ.ನಾಗರಾಜು, ಕೆ.ಎನ್.ಸತೀಶ್, ಕೆ.ಎಂ.ಪ್ರವೀಣ್, ಚಿಕ್ಕಣ್ಣ ಕೆ.ಜೆ.ಸುನಿಲ್ ಕುಮಾರ್, ಶಿವಮೂರ್ತಿ, ಅಭಿಷೇಕ್, ಸಚಿನ್, ದಯಾನಂದ್, ಮನು ಜನಾರ್ಧನ್, ಮಂಜು, ಕಿರಣ್, ಚೇತನ್, ಪ್ರಜ್ವಲ್, ಕಡವಿನಹೊಸಹಳ್ಳಿ ಗ್ರಾಮದ ಯುವಕರು ಉಪಸ್ಥಿತರಿದ್ದರು.