ಸ್ವಪಕ್ಷೀಯರಿಂದ ವಿರೋಧಕ್ಕೆ ಒಳಗಾದ ಬಿಜೆಪಿ ಅಭ್ಯರ್ಥಿ
ದೇವನಹಳ್ಳಿ /ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಡಾ.ಕೆ.ಸುಧಾಕರ್ ಟಿಕೆಟ್ ಘೋಷಣೆಯಾಗುತ್ತಲೆ, ಯಲಹಂಕದಲ್ಲಿ ಬಿಜೆಪಿ ಕಾರ್ಯಕರ್ತರ ಅಕ್ರೋಶ ಭುಗಿಲೆದ್ದಿದೆ. ಕಾರ್ಯಕರ್ತರು ಗೋ ಬ್ಯಾಕ್ ಸುಧಾಕರ್ ಅಭಿಯಾನ ಆರಂಭಿಸಿದ್ದಾರೆ. 420, ಕೋವಿಡ್ ಕಳ್ಳ ಎಂದು ಸ್ವಪಕ್ಷದವರೇ ಹಾಲಿ ಅಭ್ಯರ್ಥಿ ವಿರುದ್ಧ ಘೋಷಣೆಗಳನ್ನ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಹಳೇ ಯಲಹಂಕದ ಕೆಂಪೇಗೌಡ ಪ್ರತಿಮೆ ಬಳಿ ಗೋ ಬ್ಯಾಕ್ ಸುಧಾಕರ್ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದರು. ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು, ಪ್ರತಿಭಟನೆಯಲ್ಲಿ ವಿವಿಧ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಅಧ್ಯಕ್ಷರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಅವರ ಮಗ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಪ್ರಯತ್ನಿಸಿದ್ದರು. ಅಂತಿಮವಾಗಿ ಹೈಕಮಾಂಡ್ ಸುಧಾಕರ್ ಅವರಿಗೆ ಟಿಕೆಟ್ ನೀಡಿದೆ. ಇದು ಯಲಹಂಕ ಕ್ಷೇತ್ರದ ಕಾರ್ಯಕರ್ತರ ಅಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಗಿಳಿದ ಕಾರ್ಯಕರ್ತರು ಸುಧಾಕರ್ ವಿರುದ್ಧ ಘೋಷಣೆಗಳನ್ನ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಧಾಕರ್ ಯಲಹಂಕದಲ್ಲಿ ಪ್ರಚಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ. ಗೋ ಬ್ಯಾಕ್ ಸುಧಾಕರ್, 420, ಕೋವಿಡ್ ಕಳ್ಳ ಎಂದು ಸ್ವಪಕ್ಷದವರಿಂದಲೇ ಆಕ್ರೋಶ ವ್ಯಕ್ತವಾಗಿದೆ.
ಅಲೋಕ್ ವಿಶ್ವನಾಥ್ ಅವರನ್ನು ಬಿಜೆಪಿ ಕಡೆಗಣಿಸಿ ಅಭ್ಯರ್ಥಿ ಘೋಷಣೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಕಳೆದ ಸರ್ಕಾರದಲ್ಲಿ ಕರೊನಾ ಹೆಸರಲ್ಲಿ ಲೂಟಿ ಮಾಡಿದವರಿಗೆ ಟಿಕೆಟ್ ಘೋಷಣೆ ವಿರೋಧಿಸುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು, ನೋಟಾಗೆ ಮತ ಚಲಾವಣೆ ಮಾಡ್ತೇವೆ ಹೊರತು , ಸುಧಾಕರ್ ಗೆ ಮತ ಹಾಕೋದಿಲ್ಲ ಎಂದು ಘೋಷಣೆಯನ್ನ ಕೂಗಿದರು
ಪ್ರತಿಭಟನೆಯಲ್ಲಿ ಮಾಜಿ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಡತನಮಲೆ ಸತೀಶ್, ಮಾಜಿ ಬಿಬಿಎಂಪಿ ಸದಸ್ಯರು ಭಾಗಿಯಾಗಿದ್ದರು.