ಸಾಂಸ್ಕೃತಿಕ, ಧಾರ್ಮಿಕ, ಸ್ತಬ್ದಚಿತ್ರ ಮೆರವಣಿಗೆ ಇಲ್ಲಿನ ವಿಶೇಷತೆ । 46ನೇ ವರ್ಷದ ಸಂಭ್ರಮ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಹಿರಿಯ ಕಲಾಭಿಮಾನಿಗಳಿಂದ ಆರಂಭಗೊಂಡ ಗೋಣಿಕೊಪ್ಪ ದಸರಾ 46ನೇ ವರ್ಷದ ಸಂಭ್ರಮದಲ್ಲಿದೆ. ಅ.3 ರಿಂದ ಅ. 12 ರವರೆಗೆ ಗೋಣಿಕೊಪ್ಪ ದಸರಾ ನಡೆಯಲಿದೆ.
ಈಗಾಗಲೇ ಆಚರಣೆಗಾಗಿ ಸಮಿತಿಗಳ ರಚನೆ ಮಾಡಲಾಗಿದ್ದು, ಚಾಮುಂಡೇಶ್ವರಿ ದೇವಿ ಪೂಜೆಯೊಂದಿಗೆ ಪಟ್ಟಣದ ಜನತೆಗೆ ಮನರಂಜನೆ ಹಾಗೂ ಜಾತ್ರೆಗಳ ಆಚರಣೆಯ ಕೊರತೆ ನೀಗಿಸಲು ಆರಂಭಗೊಂಡ ಗೋಣಿಕೊಪ್ಪ ದಸರಾ ಇಂದು ನಾಡಹಬ್ಬವಾಗಿ ಕಾವೇರಿ ದಸರಾ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ.
ಹಿನ್ನೆಲೆ: 1979ರಲ್ಲಿ ಕೊಙಂಡ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಆಸಕ್ತ ಕಲಾಭಿಮಾನಿಗಳಾದ ಪದ್ಮನಾಭ್ ಕಾಮತ್, ಕೆ.ಎಂ.ಗಣಪತಿ ಸೇರಿದಂತೆ ಹಲವರು ಆಚರಣೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದರು. ನಂತರದ ದಿನಗಳಲ್ಲಿ ಬಿ.ಡಿ.ಮುಕುಂದ, ಪೊನ್ನಿಮಾಡ ಬೋಜಪ್ಪ, ಎಂ.ಜಿ.ಅಚ್ಚಪ್ಪ, ಮಲ್ಲಂಡ ಕೆ. ನಂಜಪ್ಪ, ಇವರುಗಳು ಜನೋತ್ಸವವಾಗಿ ಆಚರಿಸಿದರು. ಬೆಳ್ಳಿ ಹಬ್ಬವರೆಗೆ ಸಾರ್ವಜನಿಕರೇ ಆಚರಿಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಗೋಣಿಕೊಪ್ಪ ಗ್ರಾಪಂಗೆ ವರ್ಗಾಹಿಸಿಕೊಂಡು ಇನ್ನಷ್ಟು ವರ್ಣರಂಜಿತವಾಗಿ ಆಚರಿಸುತ್ತಾ ಬಂದಿತು. ಈ ಸಂಧರ್ಭ ಗ್ರಾಪಂ ಅಧ್ಯಕ್ಷರಾಗಿದ್ದ ಬಿ.ಡಿ.ಮುಕುಂದ, ಎಂ.ಕೆ.ಥೋಮಸ್ ನಂತರದ ದಿನಗಳಲ್ಲಿ ಪಂಚಾಯಿತಿ ಸದಸ್ಯರಾಗಿದ್ದ ಕೊಪ್ಪಿರ ಸನ್ನಿ ಸೋಮಯ್ಯ ಅಧ್ಯಕ್ಷರಾಗಿ ದಸರಾಕ್ಕೆ ಹೆಚ್ಚಿನ ಮೆರಗು ನೀಡಿದರು. ಇವರುಗಳೊಂದಿಗೆ ಅಂದು ಪಂಚಾಯಿತಿ ಸದಸ್ಯರಾಗಿದ್ದ ಬಿ.ಎನ್.ಪ್ರಕಾಶ್ ಶ್ರಮಿಸಿದ್ದಾರೆ.
ಉಪಸಮಿತಿಗಳು: ದಸರಾಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಕಾವೇರಿ ದಸರಾ ಸಮಿತಿಯೊಂದಿಗೆ 9 ಉಪ ಸಮಿತಿಗಳು ರಚನೆಯಾದವು. ಇವುಗಳಲ್ಲಿ 1989ರಲ್ಲಿ ನಾಡ ಹಬ್ಬ ದಸರಾ ಸಮಿತಿ, 1992 ಪಾಲಿಬೆಟ್ಟ ರಸ್ತೆಯ ಕೊಪ್ಪ ಸ್ನೇಹಿತರ ಬಳಗ, 1990 ರಲ್ಲಿ ಮಾರುಕಟ್ಟೆಯ ನವಚೇತನಾ ದಸರಾ ಸಮಿತಿ, 1991ರಲ್ಲಿ ರ್ವತೋಕ್ಳುವಿನ ಶಾರದಾಂಭ ದಸರಾ ಸಮಿತಿ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, 1992ರಲ್ಲಿ ಇಲ್ಲಿನ 2ನೇ ವಿಭಾಗದ ಸರ್ವರ ದಸರಾ ಸಮಿತಿ, ರ್ವತೋಕ್ಳುವಿನ ಕಾಡ್ಳಯ್ಯಪ್ಪ ದಸರಾ ಸಮಿತಿ, ಕೈಕೇರಿಯ ಭಗವತಿ ದಸರಾ ಸಮತಿ, 3ನೇ ವಿಭಾಗದ ಯುವ ದಸರಾ ಸಮಿತಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಮೊದಲು ಚೆನ್ನಂಗೊಲ್ಲಿಯ ಮಾನಿಲ್ ಅಯ್ಯಪ್ಪ ದೇವರ ಕಾಡುವಿನಿಂದ ಚೆನ್ನಂಗೊಲ್ಲಿ ದಸರಾ ಸಮಿತಿ, ರ್ವತೋಕ್ಳುವಿನ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ರಸ್ತೆಯ ನೇತಾಜಿ ದಸರಾ ಸಮಿತಿ ಹುಟ್ಟಿಕೊಂಡವಾದರೂ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಳ್ಳದೆ ಮೊಟಕು ಗೊಂಡಿದೆ. ಸಮಿತಿಗಳು ದಸರಾದಂದು ತಮ್ಮ ತಮ್ಮ ದೃಷ್ಠಿಕೋನದಿಂದ ವಿವಿಧ ತೇರು ರಚಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿವೆ. ದಸರಾ ನಾಡ ಹಬ್ಬ ಸಮಿತಿಯು ಸ್ಥಬ್ದಚಿತ್ರ ಅನಾವರಣಕ್ಕೆ ವೇದಿಕೆ ಕಲ್ಪಿಸಿ ದಸರಾಕ್ಕೆ ಮತ್ತಷ್ಟು ಮೆರಗು ನೀಡಲು ಕಾರಣವಾಯಿತು. ಇದರಿಂದ ಸಮಾಜದಲ್ಲಿ ನಡೆಯುವ ಆಗು-ಹೋಗುಗಳನ್ನು ಚಿತ್ರದ ಮೂಲಕ ಪ್ರದರ್ಶಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಯಿತು. ಜನೋತ್ಸಮವೇ ಹರಿದು ಬಂದು ಇದಕ್ಕೆ ಪ್ರೋತ್ಸಾಹ ನೀಡುವಂತಾಯಿತು.
ತೇರು ಪೈಪೋಟಿ: ವಿಜಯ ದಶಮಿಯಂದು ಉಪ ಸಮಿತಿಗಳು ತೇರು ಪೈಪೋಟಿಯಲ್ಲಿ ಭಾಗವಹಿಸುವ ಮೂಲಕ ಕಲಾಭಿಮಾನಿಗಳನ್ನು ಸೆಳೆಯುವಂತೆ ಮಾಡಿದೆ. ದಶಮಂಟಪಗಳು ಶೋಭಾಯಾತ್ರೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜನೋತ್ಸವ ಕ್ರೀಡಾಕೂಟದಲ್ಲಿ ಸೌತ್ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಡರ್ಟ್ ರ್ಯಾಲಿ ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಸಾಹಸ ಪ್ರದರ್ಶನವನ್ನು 15 ವರ್ಷಗಳಿಂದ ನೀಡುತ್ತಿದೆ. ಹರಿಶ್ಚಂದ್ರಪುರದ ಮನೆಯಪಂಡ ಯಾರ್ಡ್ನಲ್ಲಿ ದ್ವಿಚಕ್ರ ಮತ್ತು ನಾಲ್ಕುಚಕ್ರದ ರಾಷ್ಟ್ರಮಟ್ಟದ ರ್ಯಾಲಿ ನಡೆಸುತ್ತಿದೆ.
ಮಹಿಳಾ ದಸರಾ ಸಮಿತಿ ಮಹಿಳಾ ದಸರಾ ಆಚರಿಸಿಕೊಳ್ಳುವ ಮೂಲಕ ಮಹಿಳೆಯರಿಗೂ ಪ್ರತ್ಯೇಕ ಕಾರ್ಯಕ್ರಮ ನೀಡಿದಂತಾಗಿದೆ. ಹತ್ತು ಹಲವು ಕ್ರೀಡಾ ಸ್ಪರ್ಧೆ, ಪ್ರತಿಭಾ ಸ್ಪರ್ಧೆಗೂ ಅವಕಾಶ ಸಿಕ್ಕಿದಂತಾಗಿದೆ. ಆಟೋ ಮಾಲೀಕರ ಹಾಗೂ ಚಾಲಕರ ಸಂಘ ವತಿಯಿಂದ ದಸರಾ ಪ್ರಯುಕ್ತ ಕಬ್ಬಡಿ ಪಂದ್ಯಾಟ ಕೂಡ ಆಯೋಜಿಸಿ ಜನಮನ್ನಣೆ ಪಡೆದಿದೆ.ಆಯುಧ ಪೂಜೆಯಂದು ಗ್ರೀಸ್ಕಂಬ ಹತ್ತುವ ಸ್ಪರ್ಧೆ ಕೂಡ ಆಯೋಜಿಸಿ ಮನರಂಜನೆ ಹಾಗೂ ಸಾಹಸ ಕ್ರೀಡೆಗೂ ಒತ್ತು ನೀಡಿದೆ.
ಸರ್ಕಾರದಿಂದ ಅನುದಾನದಲ್ಲಿ ಹಬ್ಬ ಆಚರಿಸಲು ಆರಂಭವಾಗಿನಿಂದಲೂ ಗ್ರಾಪಂ ಸದಸ್ಯರುಗಳು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ.
———————–
ಸಮಿತಿ ರಚನೆ ಮೂಲಕ 46 ನೇ ವರ್ಷದ ದಸರಾ ಆಚರಣೆಗೆ ಮುಂದಾಗಿದ್ದೇವೆ. ಸಮಿತಿ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಯೋಜನೆ ರೂಪಿಸುತ್ತಿದೆ. ಎಲ್ಲರ ಸಹಕಾರ ಅಗತ್ಯ. ದೇವಿ ಚಾಮುಂಡೇಶ್ವರಿ ಆರಾಧನೆ ಮೂಲಕ ಧಾರ್ಮಿಕವಾಗಿ ವಿಶೇಷ ಆಚರಣೆ ಕೂಡ ಇಲ್ಲಿನ ವಿಶೇಷತೆಯಾಗಿದೆ.
– ಕುಲ್ಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷರು, ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪ.
ಫೋಟೋ : 20 ಎಂಡಿಕೆ 09 : ಮಂಟಪಗಳು
10 . ಕುಲ್ಲಚಂಡ ಪ್ರಮೋದ್ ಗಣಪತಿ
11 ; ಗೋಣಿಕೊಪ್ಪ ದಸರಾ ಲಾಂಛನ