- ರಸ್ತೆಯ ಒಂದು ಬದಿಗೆ ಕಬ್ಬಿಣದ ಗೇಟ್, ಮತ್ತೊಂದಡೆ ತಂತಿಬೇಲಿ ಸುತ್ತಿ ಸ್ವಂತಕ್ಕೆ ಬಳಕೆ
- ರಸ್ತೆ ಉಳಿಸಿಕೊಳ್ಳಲು ನಗರಸಭೆ ಮುಂದಾಗುವುದ್ಯಾವಾಗ?
ಚಿಕ್ಕಮಾಳಿಗೆ ಕೊಳ್ಳೇಗಾಲ
ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ನಿವೃತ್ತ ವಲಯ ಅರಣ್ಯಾಧಿಕಾರಿಯೊಬ್ಬರು ತಮ್ಮ ಮನೆ ಮುಂದಿನ ಸರ್ಕಾರಿ ರಸ್ತೆಗೆ ಕಬ್ಬಿಣದ ಗೇಟ್ ಅಳವಡಿಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ.
ನಿವೃತ್ತ ಆರ್ಎಫ್ ಒ ಗೋವಿಂದನ್ ಎಂಬುವರು ಬಡಾವಣೆಯ ಶ್ರೀ ಸಾಯಿಬಾಬಾ ದೇಗುಲದ ಬಳಿಯ ಡಬ್ಬಲ್ ಡೋರ್ ಅಂಗಡಿಯ ಪಶ್ಚಿಮ ಭಾಗದಲ್ಲಿ ಸರ್ಕಾರಿ ರಸ್ತೆಯ ಎರಡು ಕಡೆಗಳಲ್ಲಿ ತಲಾ ಮೂರರಂತೆ ಒಟ್ಟು 6 ನಿವೇಶನಗಳನ್ನು ಹೊಂದಿದ್ದಾರೆ.
ಈ ಪೈಕಿ ಒಂದು ನಿವೇಶನದಲ್ಲಿ ಎರಡಂತಸ್ತಿನ ಮನೆ ನಿರ್ಮಿಸಿಕೊಂಡಿದ್ದು, ಮನೆ ಪಕ್ಕದಲ್ಲಿರುವ 2 ಖಾಲಿ ಸೈಟ್ ಹಾಗೂ ರಸ್ತೆ ಎದುರಿನಲ್ಲಿ ಇತರ ಮೂರು ನಿವೇಶನಗಳನ್ನು ಕೈದೋಟ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ, ಇವೆಲ್ಲಕ್ಕೂ ಸೇರಿದಂತೆ ಸುತ್ತಲೂ ತಂತಿಬೇಲಿ ನಿರ್ಮಿಸಿಕೊಂಡು ಮನೆಗೆ ಮುಖ್ಯ ಪ್ರವೇಶ ಕಲ್ಪಿಸುವ 12 ಅಡಿ ಅಗಲ ಹಾಗೂ 100 ಅಡಿ ಉದ್ದದ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಇವರ ಮನೆ ಸುತ್ತಲಿನ ಇತರ ನಿವಾಸಿಗಳು ರಸ್ತೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ನಡುವೆ, ನಗರಸಭಾ ಆಡಳಿತ ಇತ್ತ ಗಮನಹರಿಸಿ ಸಾರ್ವಜನಿಕರ ರಸ್ತೆಗೆ ಗೇಟ್ ಹಾಕಿರುವ ಮನೆ ಮಾಲೀಕರಿಗೆ ತಿಳಿವಳಿಕೆ ನೋಟಿಸ್ ನೀಡಿ ತೆರವಿಗೆ ಕ್ರಮವಹಿಸದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಮ್ಮೆ ನಿವಾಸಿಗಳು ರಸ್ತೆ ಬಿಡಿಸಿದ್ರು!
ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡಿಗೆ ಸೇರಿದ ಶ್ರೀ ಶಿವಕುಮಾರಸ್ವಾಮೀಜಿ ಬಡಾವಣೆ ಸುಶಿಕ್ಷಿತರನ್ನು ಹೊಂದಿರುವ ಬಡಾವಣೆಯಾಗಿದ್ದು, ಇಲ್ಲಿಂದ ಸುಮಾ ಸುಬ್ಬಣ್ಣ ಎಂಬುವರು ನಗರಸಭೆಗೆ ಚುನಾಯಿತರಾಗಿದ್ದಾರೆ. ನಿವೃತ್ತ ಅಧಿಕಾರಿ ತಮ್ಮ ಮನೆ ಮುಂದಿನ ಸರ್ಕಾರಿ ರಸ್ತೆಯನ್ನು ಆಕ್ರಮಿಸಿಕೊಂಡು ಕಾನೂನು ಬಾಹಿರವಾಗಿ ಗೇಟ್ ಅಳವಡಿಸಿಕೊಂಡಿರುವುದನ್ನು ಇವರು ವಿರೋಧಿಸಿದ್ದರು ಎನ್ನಲಾಗಿದೆ.
ಅಂತೆಯೆ, ಕಳೆದ ವರ್ಷ ಈ ಬಡಾವಣೆಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸುವ ವೇಳೆ ಇಲ್ಲಿನ ನಿವಾಸಿಗಳಾದ ಶಿಕ್ಷಕ ರುದ್ರಸ್ವಾಮಿ, ಉಪನ್ಯಾಸಕ ಪ್ರಸಾದ್ ಸ್ವಾಮಿ, ನಿವೃತ್ತ ಡಿಆರ್ಎಫ್ಒ ನಾಗರಾಜು ಸೇರಿದಂತೆ ಇತರರು ರಸ್ತೆಯಲ್ಲಿದ್ದ ಗೇಟ್ ತೆರವುಗೊಳಿಸಲು ಒತ್ತಾಯಿಸಿದ್ದರು. ಹಾಗಾಗಿ, ಕೆಲ ತಿಂಗಳು ರಸ್ತೆಗೆ ಅಳವಡಿಸಿದ್ದ ಗೇಟ್ ತೆರವು ಮಾಡಿದ್ದ ಗೋವಿಂದನ್, ಇದೀಗ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ. ಅಲ್ಲದೇ, ಇದೇ ರಸ್ತೆಯಲ್ಲಿ ತೆಂಗು, ಮಾವಿನ ಗಿಡ ಬೆಳೆಸಿಕೊಂಡು ತಮ್ಮ ಮನೆ ಹಾಗೂ ನಿವೇಶನಗಳೊಳಗೆ ರಸ್ತೆಯನ್ನು ಆಕ್ರಮಿಸಿಕೊಂಡು ಬೇಲಿ ಸುತ್ತಿರುವುದು ಕಂಡು ಬಂದಿದ್ದು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ರಸ್ತೆಗೆ ಗೇಟ್ ಹಾಕಿರುವುದು ನಿಜ
ನಿವೃತ್ತ ಆರ್ಎಫ್ಒ ಗೋವಿಂದನ್ ಅವರು ಸರ್ಕಾರಿ ರಸ್ತೆಗೆ ಅಕ್ರಮವಾಗಿ ಗೇಟ್ ಹಾಕಿರುವುದು ನಿಜ. ಹಿಂದೆ ಒಮ್ಮೆ ನಿವಾಸಿಗಳ ದೂರಿನ ಹಿನ್ನೆಲೆ ತೆಗೆಸಲಾಗಿತ್ತು. ನಂತರದಲ್ಲಿ ಆ ರಸ್ತೆಯಲ್ಲಿ ಜನರು ಓಡಾಡುವುದಿಲ್ಲ ಎಂಬ ಕಾರಣಕ್ಕೆ ಮತ್ತೆ ಆಕ್ರಮಿಸಿಕೊಂಡಿದ್ದಾರೆ. ಇದೀಗ ಸಾರ್ವಜನಿಕರಿಂದ ದೂರು ಬಂದಿರುವುದರಿಂದ ತೆರವುಗೊಳಿಸಲು ನಗರಸಭಾ ಕಮಿಷನರ್ಗೆ ತಿಳಿಸಿದ್ದೇನೆ.
ಸುಮಾ ಸುಬ್ಬಣ್ಣ, ನಗರಸಭೆ 19ನೇ ವಾರ್ಡ್ ಸದಸ್ಯೆ
ಕೋಟ್:
ಶ್ರೀ ಶಿವಕುಮಾರಸ್ವಾಮೀಜಿ ಬಡಾವಣೆಯಲ್ಲಿ ನಿವೃತ್ತ ಅಧಿಕಾರಿಯೊಬ್ಬರು ಸರ್ಕಾರಿ ರಸ್ತೆಗೆ ಗೇಟ್ ಅಳವಡಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಸ್ಥಳ ಪರಿಶೀಲಿಸಿ, ಸರ್ಕಾರಿ ರಸ್ತೆಯಾಗಿದ್ದಲ್ಲಿ, ತಕ್ಷಣ ಕಾನೂನು ರೀತ್ಯ ತೆರವುಗೊಳಿಸಲಾಗುವುದು.
– ಎ.ರಮೇಶ್, ಪೌರಾಯುಕ್ತ, ನಗರಸಭಾ ಕಚೇರಿ, ಕೊಳ್ಳೇಗಾಲ
20ಕೆಜಿಎಲ್-2
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಶ್ರೀ ಶಿವಕುಮಾರಸ್ವಾಮೀಜಿ ಬಡಾವಣೆಯಲ್ಲಿ ನಿವೃತ್ತ ವಲಯ ಅರಣ್ಯಾಧಿಕಾರಿ ಗೋವಿಂದನ್ ತಮ್ಮ ಮನೆ ಮುಂದಿನ ಸರ್ಕಾರಿ ರಸ್ತೆಗೆ ಕಬ್ಬಿಣದ ಗೇಟ್ ಅಳವಡಿಸಿಕೊಂಡು ಸ್ವಂತಕ್ಕೆ ಬಳಸಿಕೊಂಡಿರುವುದು.
ನಗರಸಭಾ ಪೌರಾಯುಕ್ತ ಎ.ರಮೇಶ್ ಅವರ ಫೋಟೋ ಇದೆ.