ಪ್ರತಿನಿಧಿ ವರದಿ ಕೃಷ್ಣರಾಜಪೇಟೆ
ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪದವಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.
ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಶಿಸ್ತನ್ನು ಮೂಡಿಸುವ ದಿಕ್ಕಿನಲ್ಲಿ ಸ್ಕೂಲ್ ಆಫ್ ಇಂಡಿಯಾ ಶಾಲೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ಮಕ್ಕಳಿಗೆ ಜೀವನದ ಉಸಿರಾಗಬೇಕು ಎಂದು ಪ್ರಾಂಶುಪಾಲರಾದ ಶೈನಿಮೇರಿ ಡಯಾಸ್ ಹೇಳಿದರು.
ಅವರು ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣದ ಸಂಸ್ಕಾರವನ್ನು ನೀಡುವ ಜೊತೆಗೆ ಮಾನವೀಯ ಮೌಲ್ಯಗಳನ್ನು ತುಂಬಿ ಸಮಾಜಮುಖಿಯಾಗಿ ಮುನ್ನಡೆಸುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ಸಂಸ್ಕಾರವನ್ನು ತುಂಬಿ ತಿದ್ದಿ ನೀಡುವ ಕೆಲಸವನ್ನು ಸ್ಕೂಲ್ ಆಫ್ ಇಂಡಿಯಾ ಶಾಲೆಯು ಸಮರ್ಥವಾಗಿ ಮಾಡುತ್ತಿದೆ ಎಂದು ಶೈನಿ ಅಭಿಮಾನದಿಂದ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅನುಪಮಾ ರಾಮಚಂದ್ರ ಮಾತನಾಡಿ, ಕೃಷ್ಣರಾಜಪೇಟೆ ತಾಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜಮುಖಿಯಾಗಿ ಮುನ್ನಡೆಸುತ್ತಿರುವ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಶಿಕ್ಷಕರು ಶಾಲಾ ಮಕ್ಕಳ ಪೋಷಕರ ಜೊತೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದಾರೆ. ಇಲ್ಲಿನ ಮಕ್ಕಳ ಪ್ರತಿಭೆಯು ಯಾವುದೇ ನಗರ ಪ್ರದೇಶದ ಶಾಲೆಗಳಿಗಿಂತ ಕಡಿಮೆ ಏನಿಲ್ಲ. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಕಂಡು ಸಂತೋಷವಾಗಿದೆ. ಮಕ್ಕಳು ಶಾಲಾ ಪಠ್ಯಗಳ ಕಲಿಕೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ವಿಶ್ರಾಂತ ಬಿಸಿಎಂ ಅಧಿಕಾರಿ ಈರಪ್ಪಗೌಡ, ಪುರಸಭೆ ಮಾಜಿಅಧ್ಯಕ್ಷ ಕೆ.ಗೌಸ್ಖಾನ್ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: ೨೨ ಕೆ.ಆರ್.ಪೇಟೆ ೦೨ ಕೃಷ್ಣರಾಜಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳ ಪದವಿ ಪ್ರಧಾನ ಸಮಾರಂಭವನ್ನು ಪುರಸಭೆ ಮಾಜಿಅಧ್ಯಕ್ಷ ಕೆ.ಗೌಸ್ಖಾನ್ ಉದ್ಘಾಟಿಸಿದರು. ಪ್ರಾಂಶುಪಾಲೆ ಶೈನಿಮೇರಿ, ಅನುಪಮಾರಾಮಚಂದ್ರ, ಈರಪ್ಪಗೌಡ ಮತ್ತಿತರರು ಚಿತ್ರದಲ್ಲಿದ್ದಾರೆ.
Leave a comment