ಪ್ರತಿನಿಧಿ ವರದಿ ಕೆ.ಆರ್.ನಗರ
ಸಹಕಾರ ಸಂಘಗಳು ಮತ್ತು ಹಣಕಾಸು ಸಂಸ್ಥೆಗಳು ಬೀದಿ ಬದಿ ವ್ಯಾಪಾರಿಗಳು ಮತ್ತು ಗುಡಿ ಕೈಗಾರಿಕೆ ಮಾಡುವವರಿಗೆ ಹೆಚ್ಚಾಗಿ ಸಾಲದ ಸವಲತ್ತು ನೀಡಬೇಕು ಎಂದು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ನಿಧಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಕೆ.ಆರ್.ನಗರದ ನೂತನ ಶಾಖೆ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದವರಿಗೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡಬೇಕು .ಸಹಕಾರ ಇಲಾಖೆಯ ನಿಯಮಾನುಸಾರ ಸಂಘ ಸಂಸ್ಥೆಗಳನ್ನು ನಡೆಸಿ ಪಾರದರ್ಶಕ ಆಡಳಿತ ನೀಡಿದರೆ ಹೆಚ್ಚು ಸದಸ್ಯರು ನಿಮ್ಮ ಬಳಿ ಬರಲಿದ್ದು, ಇದರ ಜತೆಗೆ ಲೆಕ್ಕ ಪತ್ರಗಳಲ್ಲಿಯೂ ಶಿಸ್ತುಬದ್ದವಾಗಿರಬೇಕೆಂದು ಸಲಹೆ ನೀಡಿದರು. ಸಹಕಾರ ಸಂಘ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿ ಮಾಡಿ ಎಲ್ಲ ಸದಸ್ಯರು ಸಾಲ ಪಡೆಯಲು ಅನುಕೂಲವಾಗುವಂತೆ ಮಾಡಬೇಕು. ಪ್ರತಿಯೊಬ್ಬರೂ ಸಹಕಾರ ಸಂಘಗಳ ಸದಸ್ಯರಾಗಬೇಕೆಂದು ತಿಳಿಸಿದರು.
ವಾಣಿಜ್ಯ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುವುದಿಲ್ಲ. ಆದರೆ ಸಹಕಾರ ಬ್ಯಾಂಕುಗಳಲ್ಲಿ ಖಾತೆ ತೆರೆದು ವ್ಯವಹರಿಸಿದರೆ ಸಕಾಲದಲ್ಲಿ ಉತ್ತಮ ಸೇವೆ ಮತ್ತು ಸಾಲದ ಸವಲತ್ತು ದೊರೆಯಲಿದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಂಥವರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಸ್ಥೆ ಸಾಲಸೌಲಭ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕೆಂದು ಹೇಳಿದರು.
ಗ್ರಾಮೀಣ ನಿಧಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಮಾತನಾಡಿ, ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ 300 ಸದಸ್ಯರಿಂದ ಆರಂಭವಾದ ನಮ್ಮ ಸೊಸೈಟಿ ಪ್ರಸ್ತುತ ಸಾವಿರಾರು ಸದಸ್ಯರನ್ನು ಹೊಂದಿದ್ದು, ಕೆ.ಆರ್.ನಗರ ತಾಲೂಕು ಕೇದ್ರದಲ್ಲಿ ನೂತನ ಶಾಖೆ ಆರಂಭಿಸುತ್ತಿದ್ದು ಇದಕ್ಕೆ ಸದಸ್ಯರ ಸಹಕಾರ ಕಾರಣ ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ ಬಂಗೇರ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಜವಾಹರ ಮುಗ್ಗನವರ, ಜಿಲ್ಲಾ ಸೌಹಾರ್ದ ಸಂಘದ ಅಧ್ಯಕ್ಷ ಎಸ್.ಆರ್.ನಾರಾಯಣ, ಪತ್ರಕರ್ತರಾದ ಕುಪ್ಪೆ ಮಹದೇವಸ್ವಾಮಿ, ಕೆ.ಟಿ.ಮೋಹನ ಕುಮಾರ್, ಕೆ.ಎಂ.ತುಳಸಿಕುಮಾರ್ ಮಾತನಾಡಿದರು.
ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ನೇತ್ರಾವತಿ ಸುರೇಶ್, ನಿರ್ದೇಶಕರಾದ ಎಂ.ಎಸ್.ನರಸಿಂಹ, ಎಂ.ಎಸ್.ಕುಮಾರ್, ಕೆ.ಎ.ಶಶಿಕುಮಾರ್, ಶಿವರಾಜ್ಕುಮಾರ್, ಮಹದೇವ್, ಕೆ.ಎಸ್.ರಾಜೇಶ್, ಮಂಜುಳ ಕನಕರಾಜು, ಎಚ್.ಕೆ.ಭಾಗ್ಯ ಗುರುರಾಜು, ಕೆ.ಎಸ್.ರೇಣುಕೇಶ್, ಮಂಜುನಾಥ್, ಶೃತಿ ಶ್ರೀನಿವಾಸ್ಗೌಡ, ಸಿಇಒ ಮಮತಾ ಜಯಕೃಷ್ಣ, ಕಚೇರಿ ಸಿಬ್ಬಂದಿ ಸಿಂಧು ಮಂಜುನಾಥ್, ಮತ್ತಿತರರು ಇದ್ದರು.
21 ಕೆಆರ್ಎನ್-1- ಕೆ.ಆರ್.ನಗರದಲ್ಲಿ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಉದ್ಘಾಟಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ ಬಂಗೇರ, ಜಿಲ್ಲಾ ಸೌಗಾರ್ದ ಅಭಿವೃದ್ಧಿ ಅಧಿಕಾರಿ ಜವಾಹರ ಮುಗ್ಗನವರ, ಜಿಲ್ಲಾ ಸೌಹಾರ್ದ ಸಂಘದ ಅಧ್ಯಕ್ಷ ಎಸ್.ಆರ್.ನಾರಾಯಣ, ಸೊಸೈಟಿಯ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಇದ್ದರು.