13 ತಿಂಗಳಿನಿಂದ ಗುಂಡಿ ಮುಚ್ಚಿಲ್ಲ, ರಸ್ತೆ ಮಾಡಿಲ್ಲ । ಅಭಿವೃದ್ಧಿಯನ್ನು ಕೈ ಬಿಟ್ಟ ಸಕರಾರ । ಜಿ.ಟಿ.ದೇವೇಗೌಡ ಸೂಚ್ಯ ನುಡಿ
ಪ್ರತಿನಿಧಿ ವರದಿ ಮೈಸೂರು
ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ರೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚ್ಯವಾಗಿ ನುಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ವೀಕ್ ಆಗಿತ್ತು, ಅವಾಗ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ರು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದ್ದಾರೆ. ಸಿದ್ದರಾಮಯ್ಯ ಕೂಡ ಹೈಕಮಾಂಡ್ ಹೇಳಿದ್ರೆ ಅಂತ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ರೆ ಡಿ.ಕೆ.ಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿಲ್ಲ, ಅವರ ಶಾಸಕರೂ ಕೂಡ ಹೇಳಿಲ್ಲ. ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ಒಂದು ಮನವಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲಿನ ಅಭಿಮಾನದಿಂದ ಹೇಳಿದ್ದಾರೆ ಎಂದರು. ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡ ಘರ್ಜನೆ ಮಾಡಲಿಲ್ವೇ. ಪವರ್ ಶೇರಿಂಗ್ ಬಗ್ಗೆ ಮಾಧ್ಯಮದವರೇ ಹೇಳಿದ್ದೀರಿ. ಅದರ ಆಧಾರದಲ್ಲಿ ಸಿದ್ದರಾಮಯ್ಯ ಆದ ಮೇಲೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿದ್ದಾರೆ. ಇದು ದೊಡ್ಡ ಅಫರಾದ ಅಲ್ಲ. ಹೈಕಮಾಂಡ್ ಮನಸ್ಸು ಮಾಡಿದ್ರೆ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ಅಧಿಕಾರ ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಗೊತ್ತಿದೆ. ಸಿದ್ದರಾಮಯ್ಯ ಸುದೀರ್ಘವಾಗಿ ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. 15 ಬಾರಿ ಹಣಕಾಸ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಯಾವ ರೀತಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಬಗ್ಗೆ ಅವರ ಜೀವನದಲ್ಲಿ ಸಾಕಷ್ಟು ಅನುಭವಿದೆ. ಹೀಗಾಗಿ ಸಡನ್ ಆಗಿ ಅವರು ಬಿದ್ದು ಬಿಡುತ್ತಾರೆ ಎಂದು ನಾನು ಹೇಳಲ್ಲ ಎಂದ ಅವರು, ರಾಜ್ಯ ಸರ್ಕಾರ ಪತನವಾಗುತ್ತೆ, ನಾವು ಬೀಳಿಸುತ್ತೇವೆ ಎಂಬ ಬಗ್ಗೆ ನಾನು ಮಾತನಾಡಲ್ಲ. ಸಂಪೂರ್ಣ ಬಹುಮತವಿರುವ ಸರ್ಕಾರ ಬೀಳಿಸುವ ಪ್ರಶ್ನೇಯೇ ಇಲ್ಲ. ಅವರ ಪಕ್ಷದಲ್ಲೇ ಭಿನ್ನಾಭಿಪ್ರಾಯ ಎದ್ದರೆ ಸರ್ಕಾರ ಬೀಳಬಹುದು ಎಂದು ಮಾರ್ಮಿಕವಾಗಿ ನುಡಿದರು.
ಕ್ಷೇತ್ರಕ್ಕೆ ಅನುದಾನ ಇಲ್ಲ: ಕಳೆದ 13 ತಿಂಗಳ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ಬಂದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಎಂಬುದನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ. 13 ತಿಂಗಳಿನಿಂದ ಯಾವ ಗುಂಡಿಗಳು ಮುಚ್ಚಿಲ್ಲ, ರಸ್ತೆ ಮಾಡಿಲ್ಲ.
ನನ್ನ ಕ್ಷೇತ್ರಕ್ಕೆ ಯಾವ ಇಲಾಖೆಯಿಂದಲೂ ಒಂದು ರೂಪಾಯಿ ಅನುದಾನ ಬಂದಿಲ್ಲ ಎಂದು ಆರೋಪಿಸಿದರು. ಈ ಹಿಂದೆ ಜಾರಿಯಲ್ಲಿದ್ದ ಅಮೃತ ಯೋಜನೆಯ ಕೆಲಸಗಳು ಮಾತ್ರ ನಡೆಯುತ್ತಿದೆ. ಈ ಹಿಂದೆ ಒಂದು ಕ್ಷೇತ್ರದ 20 ಫಲಾನುಭವಿಗಳಿಗೆ ಕಾರು, ಸ್ಕೂಟರ್ ಕೊಡುತ್ತಿದ್ದರು. ಈಗ ಒಂದು ಕ್ಷೇತ್ರಕ್ಕೆ ಒಂದು ಕಾರು, ಸ್ಕೂಟರ್ ಕೊಡುತ್ತಾರೆ. ಎರಡು ಲಕ್ಷ ಜನ ಸಂಖ್ಯೆಯ ಕ್ಷೇತ್ರದಲ್ಲಿ ಯಾರಿಗೆ ಅಂತ ಕೊಡೋದು ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣಾ ವೇಳೆ ಗ್ಯಾರಂಟಿಗಳ ಮೇಲೆ ಸಂಪೂರ್ಣ ನಿಗಾ ವಹಿಸಿದ್ದರು. ಈಗ ಕ್ಷೇತ್ರದ ಜನರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಕೆಲಸಗಳು, ಅಭಿವೃದ್ಧಿ ಏನು ಆಗಲ್ಲ ಎಂಬುದು ಜನರಿಗೆ ಅರಿವಾಗುತ್ತಿದೆ ಎಂದರು.
ಸೂರಜ್ ರೇವಣ್ಣ ವಿರುದ್ಧ ತನಿಖೆ ನಡೆಯುತ್ತಿದೆ. ವರದಿ ಬಂದ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಜವಾಬ್ದಾರಿ: ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ವಿಚಾರ ಕುರಿತು ಮಾತನಾಡಿದ ಅವರು, ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರೇ ಈ ಪ್ರಕರಣದ ಜವಾಬ್ದಾರಿ ಹೊರಬೇಕು. ಸಿದ್ದರಾಮಯ್ಯ ಹಣಕಾಸು ಸಚಿವರಿದ್ದಾರೆ. ಹಣಕಾಸು ಇಲಾಖೆ ಅನುಮತಿ ಇಲ್ಲದೆ ಹಣ ಮತ್ತೊಂದು ಅಕೌಂಟ್ ಗೆ ಡೆಪಾಸಿಟ್ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಜವಾಬ್ದಾರಿ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ಎಸ್ಟಿ ಸಮುದಾಯದ ನೂರಾರು ಕೋಟಿ ಹಣ ಹಗಲು ದರೋಡೆಯಾಗಿದೆ. ಇದು ಎಲ್ಲರೂ ತಲೆ ತಗ್ಗಿಸುವ ವಿಚಾರ. ಸಿಎಂ ಸಿದ್ದರಾಮಯ್ಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದರು.