ಮೈಸೂರು: ನಿನ್ನೆ ಜಿ ಟಿ ದೇವೇಗೌಡರು ಮಾತನಾಡಿರುವುದನ್ನು ನೋಡಿದ್ದೇನೆ ಅದು ಅವರ ವೈಯುಕ್ತಿಕ ಅಭಿಪ್ರಾಯವಾಗಿದ್ದು ಪಕ್ಷದ ಅಭಿಪ್ರಾಯವೇ ಬೇರೆ ಇದೆ. ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ ಎದುರಾಗಿದೆ. ಅವರು ತಾತ್ಕಾಲಿಕವಾಗಿಯಾದರೂ ಸಿಎಂ ಹುದ್ದೆಯಲ್ಲಿರುವುದು ಸೂಕ್ತವಲ್ಲ ಈ ಕುರಿತು ಅವರೇ ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಮೈಸೂರಿನಲ್ಲಿ ಸಾ ರಾ ಮಹೇಶ್ ಹೇಳಿದ್ದಾರೆ.
ನಗರದಲ್ಲಿಂದು ಮಾಜಿ ಸಚಿವ ಸಾ ರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ದಿಢೀರ್ ಪ್ರತಿಭಟನೆ ನಡೆಸಿದೆ. ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಎಡಿಜಿಪಿ ಚಂದ್ರಶೇಖರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಮಹೇಶ್, ದಸರಾ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜಿ ಟಿ ದೇವೇಗೌಡರು ನೀಡಿದ ಹೇಳಿಕೆ ಅವರ ವೈಯುಕ್ತಿಕ ಹೇಳಿಕೆಯಾಗಿದೆ. ಜೆಡಿಎಸ್ ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ ಕಾರಣ ಪಕ್ಷದ ಅಭಿಪ್ರಾಯವೇ ಬೇರೆ ಇದೆ. ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ ಎದುರಾಗಿದೆ, ಕಳಂಕಿತರು ಎಂದು ಅವರ ಮೇಲೆ ಆಪಾದನೆ ಬಂದಿದೆ ಹೀಗಾಗಿ ಅವರು ರಾಜೀನಾಮೆ ಕೊಡಬೇಕು. ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡುತ್ತಿರುವುದು ರಾಜ್ಯದ ತನಿಖಾ ಸಂಸ್ಥೆ ಹೀಗಾಗಿ ಕುಮಾರಸ್ವಾಮಿ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಆದರೆ ಸಿಎಂ ವಿರುದ್ಧ ತನಿಖೆ ಮಾಡುತ್ತಿರುವುದು ಅವರ ಕೈಕೆಳಗಿರುವ ಸಂಸ್ಥೆ ಹೀಗಾಗಿ ಅವರು ತಾತ್ಕಾಲಿಕವಾಗಿಯಾದರೂ ಸಿಎಂ ಹುದ್ದೆಯಲ್ಲಿರುವುದು ಸೂಕ್ತವಲ್ಲ ಈ ಕುರಿತು ಅವರೇ ಪರಾಮರ್ಶೆ ಮಾಡಿಕೊಳ್ಳಬೇಕು. ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ ಎಂದರು.
ಇನ್ನು ಜಿ ಟಿ ದೇವೇಗೌಡರು ಇಂದಿನ ಪ್ರತಿಭಟನೆಗೆ ಗೈರಾದ ವಿಚಾರವಾಗಿ ಮಾತನಾಡಿ, ಅವರು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಅವರಿಗೆ ರಾಜ್ಯ ಸುತ್ತಾಡಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ ಹೀಗಾಗಿ ಬಂದಿಲ್ಲ ಎಂದು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ ಸಾ ರಾ ಮಹೇಶ್. ಸಿದ್ದರಾಮಯ್ಯ ಮೇಲೆ ಜಿ ಟಿ ದೇವೇಗೌಡರಿಗೆ ದಿಢೀರ್ ಪ್ರೀತಿ ಹುಟ್ಟಿರುವ ವಿಚಾರವಾಗಿ,ಈ ಪ್ರಶ್ನೆಯನ್ನು ಅವರಿಗೇ ಕೇಳಿ ಈ ಬಗ್ಗೆ ಪ್ರತಿಕ್ರಿಯಿಸಲು ನಾನು ರಾಂಗ್ ಪರ್ಸನ್ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಎಂಎಲ್ಸಿ ಸಿ ಎನ್ ಮಂಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು, ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.