ಆರ್.ಎಂ.ಚಂದ್ರಶೇಕರ ಮೂರ್ತಿ ಒತ್ತಾಯ । ನೇಹಾ ಹಿರೆಮಠ್ ಹತ್ಯೆಗೆ ಖಂಡನೆ
ಪ್ರತಿನಿಧಿ ವರದಿ ಮಳವಳ್ಳಿ
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೆಮಠ್ ಹತ್ಯೆಯನ್ನು ಖಂಡಿಸುವುದರ ಜತೆಗೆ, ಆರೋಪಿಗೆ ತ್ವರಿತವಾಗಿ ನ್ಯಾಯಾಂಗ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಗಲ್ಲು ಶಿಕ್ಷೆ ವಿಧಿಸಬೇಕೆಂದು ತಾಲೂಕು ವೀರಶೈವ ಲಿಂಗಾಯತ ಮುಖಂಡ ಆರ್.ಎಂ.ಚಂದ್ರಶೇಕರ ಮೂರ್ತಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ನೇಹಾ ಹಿರೇಮಠ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಇಂತಹ ಅಮಾನವೀಯ ಕೃತ್ಯ ನಡೆದಿದ್ದರೂ ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರುವವರು ಪ್ರಕರಣವನ್ನು ತಾತ್ಸಾರ ಮನೋಭಾವದಿಂದ ಮಾತನಾಡುವ ಮೂಲಕ ವೀರಶೈವ ಸಮುದಾಯಕ್ಕೆ ಅಪಮಾನ ಮಾಡಿದೆ. ಈ ವಿಷಯವಾಗಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟಿತಗೊಳಿಸಲು ಸಮುದಾಯದ ಮುಖಂಡರು ತಾಲೂಕಿನಾದ್ಯಂತ ಗ್ರಾಮಗಳಿಗೆ ಹತ್ತಾರು ವಾಹನಗಳಲ್ಲಿ ತೆರಳುತ್ತಿದ್ದೇವೆ ಎಂದರು.
ಚಿಕ್ಕಮುಲಗೂಡು ಪುಟ್ಟುಬುದ್ದಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ರೀತಿ ಹೇಳಿಕೆ ನೀಡುತ್ತಿದ್ದು, ರಾಜ್ಯದ ಜನತೆಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕೂಡಲೇ ಹತ್ಯೆ ಮಾಡಿರುವ ಕ್ರೂರಿ ಫಯಾಜ್ ನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕುಂದೂರು ಮೂರ್ತಿ, ಜಗದೀಶ್, ಬಿ.ಜಿ.ಪುರ ಪ್ರಭುಸ್ವಾಮಿ, ಡಿ.ಹಲಸಹಳ್ಳಿ ತೊಟ್ಟಿಮನೆ ಚನ್ನಪ್ಪ, ಮಾಗನೂರು ವೃಷಬೇಂದ್ರಪ್ಪ, ನಂಜೇಗೌಡನದೊಡ್ಡಿ ಬಸಪ್ಪದೇವರು, ಸಂಶೆಟ್ಟಿಪುರ ಲೋಕೇಶ್, ಗೌಡಗೆರೆ ಕುಮಾರ, ಕನ್ನಳ್ಳಿ ಪ್ರಸಾದ್, ಕಗ್ಗಲೀಪುರ ಆನಂದ್, ಹಳದಾಸನಹಳ್ಳಿ ಶಿವಣ್ಣ, ಹರೀಶ್ ಪಾಟೀಲ್, ಚಿಕ್ಕಬಾಗಿ ಸಂತೋಷ್, ಕ್ಯಾತನಹಳ್ಳಿ ಅಶೋಕ್ ಇತರರಿದ್ದರು.
22 ಎಂಎಲ್ವಿೇ 2
ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹ ಹಿರೇಮಠ್ ಹತ್ಯೆ ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮುಖಂಡರು, ನೇಹ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.