ಪ್ರತಿನಿಧಿ ವರದಿ ಸೋಮವಾರಪೇಟೆ
ಯಡೂರು ದೇವರ ಕೆರೆ, ಪಟ್ಟಣದ ಆನೆಕೆರೆಗೆ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಬಾಗಿನ ಅರ್ಪಿಸಿದರು.
ಎರಡೂ ಕೆರೆಗಳು ನಿರ್ವಹಣೆಯ ಕೊರತೆಯಿಂದ ಬತ್ತಿದ್ದ ಸಂದರ್ಭ ಹರಪಳ್ಳಿ ರವೀಂದ್ರ ಅವರು ಸುಮಾರು 12 ಲಕ್ಷ ವ್ಯಯಿಸಿ ಕಳೆದ 7 ವರ್ಷಗಳ ಹಿಂದೆ ಹೂಳೆತ್ತಿಸಿದ್ದರು. ಅಲ್ಲಿಂದ ಇಲ್ಲಿಯವೆಗೂ ಈ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಯಡೂರು ಕೆರೆಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಆನೆಕೆರೆಯೂ ಸಹ ತುಂಬಿದೆ.
ಈ ಹಿನ್ನೆಲೆ ರವೀಂದ್ರ ಅವರು ಕೆರೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕೆರೆ ಬತ್ತಿ ಹೋಗಿತ್ತು. ಗ್ರಾಮದ ಸುಭೀಕ್ಷೆ, ಜನ ಜಾನುವಾರುಗಳಿಗೆ ಕೆರೆಗಳು ಅತ್ಯಾವಶ್ಯಕ. ಇದನ್ನು ಮನಗಂಡು ಸ್ವ ಇಚ್ಛೆಯಿಂದ ಯಡೂರು ಕೆರೆಯ ಹೂಳು ತೆಗೆಸಲಾಯಿತು. ನಂತರ ಕೆಲವರ ಕೋರಿಕೆ ಮೇರೆ ಪಟ್ಟಣದ ಆನೆಕೆರೆಯ ಹೂಳೆತ್ತಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ನಿರ್ದೇಶಕ ಗೌಡಳ್ಳಿ ಪ್ರಸಿ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜು, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ, ಆಟೋ ಯೂನಿಯನ್ ಅಧ್ಯಕ್ಷ ಗಂಗಾಧರ್, ಸಂಘ ಸಂಸ್ಥೆಗಳ ಪ್ರಮುಖರಾದ ಶೇಷಪ್ಪ, ರಂಗಸ್ವಾಮಿ, ರಮೇಶ್, ಜನಾರ್ದನ್, ಕಿಶೋರ್, ಮಣಿ ಕುಶಾಲಪ್ಪ, ಅರ್ಚಕ ಸರ್ವೇಶ್ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.