ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಶಿವಪುರ ಮಹದೇವಪ್ಪ ಆರೋಪ
ಪ್ರತಿನಿಧಿ ವರದಿ ಚಾಮರಾಜನಗರ
ರೈತರಿಗೆ ಸಾಲದ ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕಾರ್ಯವೈಖರಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸದ್ಯದಲ್ಲೇ 4 ತಾಲೂಕುಗಳ ಗ್ರಾಮೀಣ ಬ್ಯಾಂಕ್ ಗಳಿಗೆ ಬೀಗ ಹಾಕುತ್ತೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಸಿದರು.
2013ರಿಂದಲೂ ರೈತರು ಬ್ಯಾಂಕ್ನಲ್ಲಿ ಸಾಲ ಪಡೆದಿದ್ದಾರೆ. ಬೇರೆ ಬ್ಯಾಂಕ್ಗಳಲ್ಲಿ ಶೇ.10ರಷ್ಟು ಪಾವತಿ ಮಾಡಿಸಿಕೊಂಡು ಇತ್ಯರ್ಥಪಡಿಸಿದ್ದಾರೆ. ಇದೇ ರೀತಿ ಇತ್ಯರ್ಥಪಡಿಸಿಕೊಡುವಂತೆ ಬ್ಯಾಂಕ್ನ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಂದಕವಾಡಿಯ ಬ್ಯಾಂಕ್ ನಿಂದ ರೈತರಿಗೆ ಸಾಲದ ನೋಟಿಸ್ ನೀಡಿದ್ದು, ನೈಸರ್ಗಿಕ ವಿಪತ್ತಿನಡಿ ಕೃಷಿ ಸಾಲದ ನವೀಕರಣ ಮಾಡಿಕೊಳ್ಳುವಂತೆ ಒತ್ತಡ ಹಾಕಿ, ಶಾಖೆಯ ವ್ಯವಸ್ಥಾಪಕ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರ ಹಾಕಿದರು.
ಜಿಲ್ಯಾದ್ಯಂತ ಪ್ರಸ್ತುತ 4 ಸಾವಿರ ಎಕರೆ ಪ್ರದೇಶದಲ್ಲಿ ಬಾಳೆ ಫಸಲು ನಾಶವಾಗಿದೆ. ಸರ್ಕಾರದ ಗಮನಕ್ಕೆ ತಂದು 2 ತಿಂಗಳಾದರೂ ಸರ್ಕಾರ ಬೆಳೆ ನಷ್ಟ ಸಂಬಂಧ ನೋಂದಣಿ ಮಾಡಲು ಲಾಗಿನ್ ತೆರೆದಿಲ್ಲ. ಕಂದಾಯ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದ ರೈತರಿಗೆ ಪರಿಹಾರ ದೊರೆತಿಲ್ಲ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪೂರ್ವ ಮುಂಗಾರಿನಲ್ಲಿ ಜಿಲ್ಲೆಯ 12,229 ರೈತರು ವಿವಿಧ ಬೆಳೆಗಳಿಗೆ ವಿಮೆ ಹಣ ಸಂದಾಯ ಮಾಡಿದ್ದಾರೆ. ಅಲ್ಲದೆ ಹಿಂಗಾರಿನಲ್ಲಿ 2,289 ರೈತರು ಹಣ ಸಂದಾಯ ಮಾಡಿದ್ದಾರೆ. ಈ ವರ್ಷ ಸರ್ಕಾರವೇ ಬರಗಾಲ ಎಂದು ಘೋಷಣೆ ಮಾಡಿದೆ. ಆದರೆ ವಿಮಾ ಕಂಪನಿಯವರು ಇಲ್ಲಿಯವರೆವಿಗೂ ರೈತರ ಖಾತೆಗೆ ಹಣ ಜಮಾ ಮಾಡಿಲ್ಲ ಎಂದರು.
ಪ್ರತಿಭಟನೆ ನಡೆದು 15 ದಿನಗಳು ಕಳೆಯುತ್ತಿದ್ದರೂ ಜಿಲ್ಲಾಧಿಕಾರಿ ರೈತರೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆಗಳನ್ನು ಕೇಳಲಿಲ್ಲ. ಜಿಲ್ಲಾಡಳಿತ ನಿರಂತರವಾಗಿ ರೈತರನ್ನು ಕಡೆಗಣಿಸಿಕೊಂಡು ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಗೌಡೇಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮಲ್ಲಣ್ಣ, ಭೂಪತಿ ಇದ್ದರು.
14ಸಿಎಚ್ಎನ್.1:
ಚಿತ್ರವಿದೆ