ತಹಸೀಲ್ದಾರ್ ಎಂ.ಮಮತಾ ಸೂಚನೆ
ಪ್ರತಿನಿಧಿ ವರದಿ ಬೇಲೂರು
ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ಕಟ್ಟೆಗೆ ಮಣ್ಣು ತುಂಬಿದ ಪರಿಣಾಮ ಕಟ್ಟೆ ಹೊಡೆದು ಸುಮಾರು ೫೦ ಎಕರೆಗೂ ಹೆಚ್ಚು ಗದ್ದೆಯ ಬೆಳೆ ಸಂಪೂರ್ಣ ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮದ ಸರ್ವೇ ನಂ.೫೦ರಲ್ಲಿ ಸರ್ಕಾರಿ ಗೋಮಾಳವನ್ನು ಲಿಂಗಶೆಟ್ಟಿ ಹಾಗೂ ಮಂಜುಶೆಟ್ಟಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಶುಂಠಿ ಬೆಳೆಯುವ ಸಂದರ್ಭದಲ್ಲಿ ಕಾಲುವೆ ಒಡ್ಡಿಗೆ ಮಣ್ಣು ಸುರಿದ ಪರಿಣಾಮ ನೆರೆ ಹಾವಳಿಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ಮಾಧ್ಯಮದ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ನಂತರ ಎಂ.ಮಮತಾ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದಂತಹ ಬೆಳೆಗೆ ಯಾರೊ ಒಬ್ಬರ ಅಸೂಯೆಗೆ ಬಲಿಯಾಗಿರುವುದು ಬೇಸರದ ಸಂಗತಿ. ಯಾರು ಕೆರೆಯ ಒಡ್ಡನ್ನು ಕಟ್ಟಿದ್ದಾರೆ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಮಾಡಿಸಿದ್ದಾರೋ ಅಂತಹವರ ಮೇಲೆ ಕಠಿಣ ಕೃಮ ಕೈಗೊಳ್ಳಲಾಗುವುದು. ಅಲ್ಲದೆ, ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಸೂಚಿಸಲಾಗುವುದು. ಈಗಾಗಲೇ ಸರ್ಕಾರ ಯಾರಿಗೆ ಭೂಮಿ ಇಲ್ಲವೋ ಅಂತಹವರಿಗೆ ಭೂಮಿ ಮಂಜೂರು ಮಾಡಿದೆ. ಮಂಜೂರಾತಿ ಸಮಯದಲ್ಲಿ ಕೆರೆಕಟ್ಟೆಗಳನ್ನು ಅಥವಾ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದರೆ ಅಂತವರ ಮೇಲೆ ಕ್ರಮ ಕೈಗೊಂಡು ಮಂಜೂರಾತಿಯನ್ನು ವಾಪಸ್ಸು ಪಡೆಯಲು ಸರ್ಕಾರದ ಆದೇಶವಿದೆ. ಸಂಪೂರ್ಣ ದಾಖಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಚಂದ್ರೇಗೌಡ, ಭಾನುಪ್ರಕಾಶ್, ಗ್ರಾಮಸ್ಥರು ಹಾಜರಿದ್ದರು.