ಮೈಸೂರು: ತಮ್ಮ ಗೆಲುವಿಗೆ ಬಿಜೆಪಿ ಎಷ್ಟು ಕಾರಣವೋ ಜೆಡಿಎಸ್ ಕೂಡ ಅಷ್ಟೇ ಕಾರಣ ಎಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ನಾಯಕ ವಿ ಸೋಮಣ್ಣ ಹೇಳಿದರು. ನಗರದಲ್ಲಿಂದು ಹೆಚ್ ಡಿ ಕುಮಾರಸ್ವಾಮಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಣ್ಣ ತಾವು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿಯವರೇ ಕಾರಣ, ಅವರ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ನಾಯಕರು ಒಪ್ಪಿದರು, ಅವರೆಲ್ಲರಿಗೆ ತಾನು ಋಣಿಯಾಗಿರುವುದಾಗಿ ಸೋಮಣ್ಣ ಹೇಳಿದರು. ರಾಜ್ಯ ರಾಜಕೀಯದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿದೆ, ಯಾರಿಗೆ ಗೌರವ ಸಲ್ಲಿಸಬೇಕು ಅನ್ನೋದನ್ನು ಜನ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ಸೋಮಣ್ಣ ಹೇಳಿದರು. ರಾಜಕಾರಣವೇ ಬದುಕಲ್ಲ, ಅದೊಂದು ಅವಕಾಶ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾನು ಅವಕಾಶವನ್ನು ಉಪಯೋಗಿಸಿಕೊಂಡಿರುವುದಾಗಿ ಅವರು ಹೇಳಿದರು.