ಮೈಸೂರು: ನಾನು ಸುಮಲತಾ ಅವರ ಮನೆಗೆ ಹೋದಾಗ ಸಹೋದರನ ರೀತಿ ನೋಡಿದ್ದಾರೆ ಸುಮಲತಾ ಅವರ ಮೇಲೆ ವಿಶ್ವಾಸ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಇಂದು ಮಂಡ್ಯದಲ್ಲಿ ಅವರ ಹಿತೈಷಿಗಳ ಸಭೆ ನಡೆದು ತೀರ್ಮಾನಿಸಲಿದ್ದಾರೆ. ಸಭೆಯಲ್ಲಿ ಅಂತಿಮ ನಿರ್ಣಯ ಮಾಡಲಿದ್ದಾರೆ. ಅವರ ನಿರ್ಣಯವನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಅವರು ನಿರ್ಧಾರ ಮಾಡುತ್ತಾರೆ. ಅವರ ಮನೆಗೆ ಹೋಗಿದ್ದ ವೇಳೆ ಅತ್ಯಂತ ಅಭಿಮಾನ, ವಿಶ್ವಾಸದಿಂದ ಬರಮಾಡಿಕೊಂಡರು. ಭಿನ್ನಾಭಿಪ್ರಾಯ ಏನೇ ಇದ್ದರೂ ಸಹೋದರನಂತೆ ಭಾವಿಸಿದ್ದರು. ಅವರು ನನ್ನನ್ನು ಬೆಂಬಲಿಸಬಹುದು. ನನಗೆ ಅವರ ಮೇಲೆ ವಿಶ್ವಾಸವಿದೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಜೀವನದಲ್ಲಿ ಜಾ.ದಳ ಕಾರ್ಯಕರ್ತರು, ದೇವೇಗೌಡರ ಭಜನೆ ಮಾಡಿಕೊಂಡು ಬಂದವರು. ಅವರ ಭಜನಯ ವಾಸನೆ ದೂರ ಹೋಗಿಲ್ಲ. ಹೀಗಾಗಿ ನಾನು ಏನು ಮಾಡೋದಕ್ಕೆ ಆಗುತ್ತೆ. ನಿನ್ನೆ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಸಿಎಂ ಹುದ್ದೆಯ ಜತೆಗೆ ಜ್ಯೋತಿಷಿ ಆಗಿದ್ದಾರೆ. ಜ್ಯೋತಿಷ್ಯ ಹೇಳುವುದನ್ನೂ ಅವರು ಕಲಿತಿದ್ದಾರೆ. ನಾನು ಮೈಸೂರಿನಲ್ಲಿ ಮೈತ್ರಿ ಧರ್ಮ ಪಾಲಿಸಿದ್ದೇನೆ. ನಾನು ಮೈತ್ರಿ ಧರ್ಮ ಪಾಲಿಸದಿದ್ದರೆ ಒಂದೂ ಸ್ಥಾನ ಗೆಲ್ಲುತ್ತಿರಲಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ನಾವು ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ನಾವು ಕೆಲಸ ಮಾಡದಿದ್ದರೆ ಡಿ.ಕೆ.ಸುರೇಶ್ ಸೋಲುತ್ತಿದ್ದರು ಎಂದರು.