ಮಂಡ್ಯ: ಕಾನೂನು ಬದ್ಧವಾಗಿ ಸೈಟು ಪಡೆದಿದ್ದರೆ ಯಾಕೆ ವಾಪಸ್ಸು ಕೊಟ್ಟಿದ್ದೀರಾ? ತಪ್ಪು ಮಾಡಿದ್ದೀರಾ ಅದಕ್ಕೆ ಸೈಟು ವಾಪಸ್ ಕೊಟ್ಟಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, SIT ಅಂದ್ರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೇಸ್ಟಿಕೇಶನ್ ಟೀಮ್ ಎಂಬುದಾಗಿದೆ ಇದು ಇವರುಗಳ ಅಸ್ತ್ರವಾಗಿದೆ. ಸರ್ಕಾರದ ಭೂಮಿಯನ್ನು ಕಬಳಿಸಿದ್ದಾರೆ, ಕಾನೂನು ಬದ್ಧವಾಗಿ ಸೈಟು ಪಡೆದಿದ್ದರೆ ಯಾಕೆ ವಾಪಸ್ಸು ಕೊಟ್ಟಿದ್ದೀರಾ? ತಪ್ಪು ಮಾಡಿದ್ದೀರಾ ಅದಕ್ಕೆ ಸೈಟು ವಾಪಸ್ ಕೊಟ್ಟಿದ್ದೀರಾ. ಮುಡಾ ಹಗರಣ ಅತ್ಯಂತ ಕೆಟ್ಟ ರೀತಿ ಆಗಿದೆ. ಲೋಕಾಯುಕ್ತದಲ್ಲಿ ನಿಮ್ಮ ಅಧಿಕಾರಿಗಳಿಂದ ತನಿಖೆ ಮಾಡಲು ಸಾಧ್ಯನಾ? ನಿಮ್ಮ ಲೋಕಾಯುಕ್ತ ಅಧಿಕಾರಿಗಳಿಂದ ಸರಿಯಾಗಿ ತನಿಖೆ ಆಗಿಲ್ಲ. ಕೋರ್ಟ್ನಲ್ಲಿ ಏನು ತನಿಖೆ ಆಗಬೇಕೆಂದು ಆದೇಶ ನೀಡಿದೆ. ನ್ಯಾಯಯುತವಾಗಿ ತನಿಖೆ ಆಗಬೇಕಿದ್ದು ಈಗ ಇಡಿ ಬಂದಿದೆ ಮುಂದೆ ಏನು ಆಗುತ್ತೆ ನೋಡೋಣ ಎಂದರು.
ಈ ಸರ್ಕಾರಕ್ಕೆ ಕುಮಾರಸ್ವಾಮಿಯೇ ಪ್ರಮುಖ ಟಾರ್ಗೆಟ್
ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ? ನನ್ನ ಮೇಲೆ ಮೊನ್ನೆ ಯಾವ ಆಧಾರದ ಮೇಲೆ ಕಂಪ್ಲೇಟ್ ಕೊಟ್ಟಿದ್ದೀರಾ? ಮೊನ್ನೆ ಯಾವುದೋ ಒಂದು ಎನ್ಸಿಆರ್ ಹಾಕಿದ್ದಾರೆ. ಎಫ್ಐಆರ್ ಮಾಡಿಸಲೆಬೇಕೆಂದು ಸಿಎಂ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಮುಖ ಟಾರ್ಗೆಟ್ ಎಂದರೆ ನಾನೇ. ಆದರೆ ನಾನು ನ್ಯಾಯಬದ್ಧವಾಗಿ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ ಎಂದು ಹೇಳಿದರು.
ಬೆಂಗಳೂರು ನಗರದ ಕೆರೆ ಕಟ್ಟೆಗಳನ್ನು ನುಂಗಿ ಹಾಕಿದ್ದಾರೆ
ನಿಮ್ಮ ಹಣದ ದಾಹಕ್ಕೆ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ನುಂಗಿದ್ದೀರಾ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಆಗುತ್ತಿದೆ. ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಮಳೆ ಬಂದು ಮುಳುಗುತ್ತಿಲ್ಲ.
ಕೆರೆಗಳು, ರಾಜ ಕಾಲುವೆಗಳನ್ನು ಯಾಕೆ ಉಳಿಸಿಲ್ಲ. ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ನಿಮ್ಮ ಭೂ, ಹಣದ ದಾಹದಿಂದ ಬೆಂಗಳೂರು ಹೀಗೆ ಆಗಿದೆ. ಪುಟ್ಟೇನಹಳ್ಳಿಯಲ್ಲಿ , ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿದ್ರು, ಕೆರೆ ಮುಚ್ಚಿ ಡಾಲರ್ಸ್ ಕಾಲೋನಿ ಅಂತ ಮಾಡಿದ್ರು. ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇವರಿಗೆ ಇಲ್ಲ.ಮಳೆ ಬಂದ್ರೇ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ಖಾಲಿ ಮಾಡ್ತಾರಾ. ನಾನು 110 ಹಳ್ಳಿಯನ್ನು ಬೆಂಗಳೂರಿಗೆ ಸೇರಿಸಿದ್ದು, ಜೆಎನ್ಯುಎಂ ಸ್ಕೀಂಗಾಗಿ, ಈ 110 ಹಳ್ಳಿಗೆ ನೀರು ಕೊಡ್ತೀವಿ ಅಂತಾ ಹೇಳಿದ್ದಾರೆ. ಅದ್ರಲ್ಲಿ 50 ಲಕ್ಷ ಜನರಿಗೆ ನೀರು ಕೊಡ್ತೀವಿ ಅಂತಾ ಡಿಸಿಎಂ ಹೇಳಿದ್ದಾರೆ. ಅಲ್ಲಿ 50 ಲಕ್ಷ ಜನ ಇರಲು ಸಾಧ್ಯನಾ ಆಗಿದ್ರೆ ಬೆಂಗಳೂರು ಜನ ಸಂಖ್ಯೆ ಎಷ್ಟು. ಸುಳ್ಳು ಹೇಳಲು ಇತಿಮಿತಿ ಬೇಡ್ವಾ ಇದೊಂದು ನಗೆ ಪಾಟಲು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಡಿಸಿಎಂ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
NDA ಕುಟುಂಬದಿಂದ ಒಬ್ಬನೇ ಅಭ್ಯರ್ಥಿ ಕಣಕ್ಕೆ
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಕಾಂಗ್ರೆಸ್ನವರು ಯಾವ ಅಭ್ಯರ್ಥಿಯನ್ನಾದ್ರು ಹಾಕಲಿ. ಅಚ್ಚರಿಯಾದ್ರು ಹಾಕೋತಾರೋ, ಇನ್ಯಾವ ತರಹ ಅಭ್ಯರ್ಥಿ ಹಾಕೋತಾರೊ ಯಾವ ಅಭ್ಯರ್ಥಿ ಬೇಕಿದ್ರು ಹಾಕಿಕೊಳ್ಳಲಿ. ಗೆಲ್ಲುವುದಕ್ಕಾಗಿಯೇ ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು. ಎಲ್ಲರೂ ಸೋಲುತ್ತೇವೆ ಎಂದು ಚುನಾವಣೆ ನಡೆಸಲ್ಲ. ನಮಗೆ ನಮ್ಮ ಕಾರ್ಯಕರ್ತರೇ ಅಭ್ಯರ್ಥಿ ನಮ್ಮ ಅಭ್ಯರ್ಥಿ ಎನ್ಡಿಎ ಎಂದು ಹೇಳಿದ್ದೇನೆ. ನಮ್ಮದು ಕೇವಲ ದೇವೇಗೌಡರ ಕುಟುಂಬ ಅಲ್ಲ ನಮ್ಮದು ಈಗ ಎನ್ಡಿಎ ಕುಟುಂಬ. ಎನ್ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ ಎಂದು ಹೇಳಿಕೆ ನೀಡಿದರು.
ಮೇಕೆದಾಟಿಗೆ ಪ್ರಧಾನಿಗಳ ಹತ್ತಿರ 5 ನಿಮಿಷಗಳಲ್ಲಿ ಸಹಿ ಹಾಕಿಸಿಕೊಡ್ತೀನಿ
ಕೆಆರ್ಎಸ್ ಡ್ಯಾಂ 2ನೇ ಬಾರಿ ಭರ್ತಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂ ವ್ಯಾಪ್ತಿಯಲ್ಲಿ 900 ಕೆರೆಗಳು ಇವೆ. ಎಷ್ಟು ಕೆರೆಗಳನ್ನು ಇವರು ತುಂಬಿಸಿದ್ದಾರೆ? ಎಲ್ಲಾ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೀರಾ.
ನನಗೆ ಮೇಕೆದಾಟಿಗೆ ಪ್ರಧಾನಿಗಳ ಹತ್ತಿರ ಅನುಮತಿ ಕೊಡಿಸಿ ಅಂತೀರಾ. ತಮಿಳುನಾಡಿನ ಸ್ನೇಹಿತರು ನಿಮ್ಮವರೇ ನಿಮ್ಮ ಪಾಟ್ನರ್ಸ್ ಹತ್ತಿರ ಮಾತನಾಡಿ ಒಪ್ಪಿಸಿ. ಒಪ್ಪಿಸಿ ಕರೆದುಕೊಂಡು ಬನ್ನಿ, ಐದು ನಿಮಿಷದಲ್ಲಿ ಸಹಿ ಹಾಕಿಸಿಕೊಡ್ತೀನಿ ಎಂದು ಹೇಳಿದರು.