ಬೆಂಗಳೂರು: ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಹುಟ್ಟುಹಬ್ಬವನ್ನೂ ಅಲ್ಲೇ ಆಚರಿಸಿಕೊಂಡು ನಗರಕ್ಕೆ ವಾಪಸ್ಸಾಗಿರುವ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಎಲ್ಲರಿಗೂ ಇರುವ ಕುತೂಹಲವೆಂದರೆ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆಯೇ? ನಿಖಿಲ್ ತಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಆಡುವುದನ್ನು ನೀವು ಗಮನಿಸಬಹುದು. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ವಿಚಾರವನ್ನು ಬಿಜೆಪಿ ವರಿಷ್ಠರು ಇನ್ನೂ ಬಹಿರಂಗ ಮಾಡಿಲ್ಲ. ಹಾಗಾಗೇ ನಿಖಿಲ್ ಯಾವುದನ್ನೂ ನಿಖರವಾಗಿ ಹೇಳಲ್ಲ. ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಸಭೆಗಳನ್ನು ನಡೆಸಿ ಅವರು ನೀಡಿರುವ ಫೀಡ್ ಬ್ಯಾಕ್ ಅನ್ನು ಪಕ್ಷದ ವರಿಷ್ಠರಿಗೆ ನೀಡಿದ್ದೇನೆ ಎಂದು ಅವರು ಹೇಳಿದರು. ಹೆಚ್ ಡಿ ಕುಮಾರಸ್ವಾಮಿ ರಾಜ್ಯಮಟ್ಟದ ನಾಯಕ ಅವರಿಗೆ ರಾಷ್ಟ್ರಮಟ್ಟದ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎನ್ನುವ ನಿಖಿಲ್, ಯಾವುದಕ್ಕೂ ಎರಡೂ ಪಕ್ಷಗಳ ನಾಯಕರು ಚರ್ಚೆ ನಡೆಸಿ ತೆಗೆದುಕೊಳ್ಳುವ ನಿರ್ಣಯಗಳು ಅಂತಿಮವಾಗಲಿವೆ ಎಂದರು.