ಸರ್ಕಾರಿ ಶಾಲೆಯ ಮಕ್ಕಳಿಗೆಂದು ಸರ್ಕಾರ ನೀಡಿದ್ದ ಹಾಲಿನ ಪುಡಿ ಪ್ಯಾಕೇಟ್ ಗಳನ್ನು ಕದ್ದೊಯ್ಯುವಾಗ ಮುಖ್ಯ ಶಿಕ್ಷಕ ಸಿಕ್ಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ಜರುಗಿದೆ.
ದ್ವಿಚಕ್ರ ವಾಹನದಲ್ಲಿದ್ದ ಬ್ಯಾಗ್ ನಲ್ಲಿ 3 ಹಾಲಿನ ಪ್ಯಾಕೆಟ್ ಮತ್ತು ಟೂಲ್ ಬಾಕ್ಸ್ ನಲ್ಲಿ 7 ಪ್ಯಾಕೆಟ್ ಸೇರಿದಂತೆ ಒಟ್ಟು 10 ಹಾಲಿನ ಪ್ಯಾಕೆಟ್ ಕದ್ದೊಯ್ಯುತ್ತಿದ್ದಾಗ ಮುಖ್ಯಶಿಕ್ಷಕ ಸಿಕ್ಕಿಬಿದ್ದಿದ್ದಾನೆ. ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಉಚಿತವಾಗಿ ಶಾಲೆಗೆ ನೀಡುವ ಹಾಲಿನ ಪುಡಿಯನ್ನ ಕದ್ದೊಯ್ಯುತ್ತಿದ್ದ ಸಂದರ್ಭದಲ್ಲಿ ಹೆಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹೆಚ್ ಡಿ ಕೋಟೆ ತಾಲೂಕು ಕೇಂದ್ರ ಸ್ಥಾನದ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿ ಶಿಕ್ಷಕ ಸಿಕ್ಕಿಬಿದ್ದಿದ್ದು, ಶಿಕ್ಷಕನ ಸ್ಕೂಟರ್ ನಲ್ಲಿ ತಲಾ 1 ಕೆಜಿ ತೂಕದ ಹತ್ತು ಹಾಲಿನ ಪ್ಯಾಕೇಟ್ ಗಳು ಪತ್ತೆಯಾಗಿವೆ. ಹಾಗೂ ಹಾಲಿನ ಪುಡಿ ಪ್ಯಾಕೆಟ್ ಗಳ ಅವಧಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಮುಖ್ಯ ಶಿಕ್ಷಕ ಗಣೇಶ್ ಪ್ರತಿಕ್ರಿಯಿಸಿದ್ದಾರೆ. ಆದರೆ ಬರುವ ಡಿಸೆಂಬರ್ ವರೆಗೂ ಹಾಲಿನ ಪುಡಿ ಬಳಕೆ ಮಾಡಲು ಅವಧಿ ಇರುವುದು ಖಾತರಿಯಾಗಿದೆ. ತಾಲೂಕಿನ ಶಾಲೆಯ ಸ್ಥಿತಿಯೇ ಹೀಗಾದರೆ ಗ್ರಾಮೀಣ ಭಾಗದ ಶಾಲೆಗಳ ಪಾಡೇನು? ಎಂದು ಜನರ ಪ್ರಶ್ನೆ ಮೂಡಿಸಿದ್ದು.
ಘಟನೆ ನಡೆದ ಕೂಡಲೇ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ತಾಸುಗಳೇ ಕಳೆದರೂ ಸ್ಥಳಕ್ಕಾಗಮಿಸದ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ತುಂಬಾ ತಡವಾಗಿ ಸ್ಥಳಕ್ಕಾಗಮಿಸಿದ ಬಿ ಆರ್ ಸಿ ಕೃಷ್ಣಯ್ಯ ಮತ್ತು ಸಿಬ್ಬಂದಿಗಳು ಹಾಲಿನ ಪ್ಯಾಕೇಟ್ ಗಳ ಪರಿಶೀಲನೆ ಮಾಡಿದ್ದಾರೆ.
ಹಾಲಿನ ಪುಡಿ ಪ್ಯಾಕೆಟ್ ಸಮೇತ ದ್ವಿಚಕ್ರ ವಾಹನವನ್ನ ಬಿ ಆರ್ ಸಿ ಕೃಷ್ಣಯ್ಯ ವಶಕ್ಕೆ ತೆಗೆದುಕೊಂಡಿದ್ದಾರಲ್ಲದೆ,
ಹೆಚ್ ಡಿ ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.