ಹಾಸನ: ಹದಿನೈದು ವರ್ಷ ನನ್ನ ಹತ್ತಿರ ತಿಂದು, ತೇಗಿ ವ್ಯಾಪಾರ ಮಾಡಿಕೊಂಡು ಲೂಟಿ ಹೊಡೆದವನು ಈಗ ಎಲ್ಲರಿಗೂ ಟೋಪಿ ಹಾಕಿ ಹೌಸಿಂಗ್ಬೀರ್ಡ್ ಛೇರ್ಮನ್ ಆಗವ್ನೆ ಎಂದು ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹರಿ ಹಾಯ್ದರು.
ಅರಸೀಕೆರೆ ತಾಲೂಕು ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇವೇಗೌಡರಿಗೆ ಮೋಸ ಮಾಡಿದವರು ಯಾರೂ ಉಳಿದಿಲ್ಲ. ಇಲ್ಲಿ ಏನೂ ಗೀಟೋದಿಲ್ಲವೆಂದು ಒಬ್ಬ ವ್ಯಕ್ತಿ ಅಲ್ಲಿಗೆ ಹೋಗಿದ್ದಾರೆ. ಇನ್ನೆರಡು ಎರಡು ತಿಂಗಳು ಕಳೆಯಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಎನ್ನುವುದು ತಿಳಿಯುತ್ತದೆ. ಈ ದೇಶದಲ್ಲೇ ಕಾಂಗ್ರೆಸ್ ಇರಲ್ಲ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಇಂತಹವರನ್ನೆಲ್ಲಾ ನಾನು ನೋಡಿ ಬಿಟ್ಟಿರುವವನು ಎಂದರು.
ಕುಮಾರಸ್ವಾಮಿ ಮನೆಗೆ ಬಂದು ಅವರ ಪಾದಕ್ಕೆ ಕಾಂಗ್ರೆಸ್ ಪಕ್ಷವನ್ನು ಅಡವಿಟ್ಟು ಕೊನೆಗೆ ಅವರನ್ನೇ ತೆಗೆದರು. ಇವೆಲ್ಲ ಹೆಚ್ಚು ದಿನ ನಡೆಯುವುದಿಲ್ಲ. ನಾನು ಹದಿನೈದು ವರ್ಷಗಳ ಕಾಲ ಸಾಕಿದ ವ್ಯಕ್ತಿ ನಮ್ಮನ್ನೇ ಹೆದರಿಸಲು ನೋಡುತ್ತಿದ್ದಾನೆ. ಅವನಿಗೆ ಜನರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ೨೦೨೮ ಕ್ಕೆ ಆತನ ಸ್ಥಿತಿ ಏನಾಗುತ್ತೆ ನೋಡಿ ಎಂದು ಕೆಎಂಶಿ ವಿರುದ್ಧ ಕಿಡಿ ಕಾರಿದರು.
ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಕೇಂದ್ರದಲ್ಲಿ ಮಂತ್ರಯಾಗುತ್ತಾರೆ. ಈ ಊರಿನಲ್ಲಿ ಶಪಥ ಮಾಡುತ್ತೇನೆ. ಉಳಿದಿರುವ ಕೊಬ್ಬರಿಯನ್ನು ಖರೀದಿ ಮಾಡಿಸುತ್ತೇನೆ. ದೇವೇಗೌಡರು, ಕುಮಾರಸ್ವಾಮಿ ಕರೆದುಕೊಂಡು ನರೇಂದ್ರಮೋದಿ ಅವರ ಬಳಿ ಹೋಗಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಈ ದೇಶದಲ್ಲಿ ಕಾಂಗ್ರೆಸ್ ಗಿಡ ಜಾಸ್ತಿ ಇದೆ. ಅವುಗಳ ಜೊತೆಗೆ ಆ ಪಕ್ಷವನ್ನೂ ಕಿತ್ತು ಹಾಕಬೇಕು ಎಂದರು.