ಮಂಡ್ಯ: ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗೋದಿಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಂಡ್ಯದಲ್ಲಿಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಎನ್ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಜೆಡಿಎಸ್ ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಯತ್ನಾಳ್ ಹೇಳಿಕೆಗೆ ಖಡಕ್ ಟಾಂಗ್ ಕೊಟ್ಟಿರುವ ಎಚ್ಡಿಕೆ ಇಂದು ಸಂಜೆ ಬೆಂಗಳೂರಿನಲ್ಲಿ ಮೀಟಿಂಗ್ ಇದೆ. ಯಡಿಯೂರಪ್ಪ ಎಲ್ಲ ಸೇರುತ್ತಿದ್ದು ಕುಳಿತು ಚರ್ಚೆ ಮಾಡ್ತೇವೆ. ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗೋದಿಲ್ಲ, ಯಾವ ರೀತಿ ಶಕ್ತಿ ತುಂಬಿದೆ ಎಂಬ ಚರ್ಚೆ ಈಗ ಉಪಯೋಗವಾಗೋದಿಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಅದನ್ನು ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲಾ?. ಎಂದು ಪ್ರಶ್ನಿಸಿದರಲ್ಲದೆ ನಾನು ಈ ಕ್ಷಣದವರೆಗೂ ಜನತಾದಳ ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ. ಎನ್ಡಿಎ ಅಭ್ಯರ್ಥಿ ಎಂದೇ ಮಾತನಾಡಿದ್ದೇನೆ. ನಮ್ಮ ಮೈತ್ರಿಗೆ ಅಡ್ಡಿ ಆಗಬಾರದು ಎಂದು ನಾನು ನಡೆದುಕೊಳ್ಳುತ್ತಿದ್ದೇನೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು ಎಂದು ಯತ್ನಾಳ್ ಗೆ ಟಾಂಗ್ ನೀಡದ್ದಾರೆ.
ಚನ್ನಪಟ್ಟಣ ಮೈತ್ರಿ ಟಿಕೆಟ್ ಗೊಂದಲ ವಿಚಾರವಾಗಿ , ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಕೇಂದ್ರ ಸಚಿವ ಹೆಚ್ಡಿಕೆ, ಎಲ್ಲ ಸುಗಮವಾಗಿ ಮಾಡಬೇಕೆಂದು ಇದೆ.ಯಾರು ಯಾರ ಮೇಲೂ ದಬ್ಬಾಳಿಕೆ ಮಾಡಲು ಆಗಲ್ಲ. ಪ್ರೀತಿ ವಿಶ್ವಾಸದಿಂದ ಚುನಾವಣೆ ನಡೆಸಬೇಕು. ವಿಶ್ವಾಸಕ್ಕೆ ಧಕ್ಕೆ ಆಗಬಾರದು. ಅದನ್ನು ಎರಡು ಪಕ್ಷದ ನಾಯಕರು ಮನವರಿಕೆ ಮಾಡಿಕೊಳ್ಳಬೇಕು.ಒಂದು ಕಡೆ ಪ್ರೀತಿ ವಿಶ್ವಾಸ ಇದ್ದರೇ ಸಾಲದು.
ಎರಡು ಕಡೆಯೂ ಪರಸ್ಪರ ಸ್ಪಂದನೆ ಇರಬೇಕು ಎಂದರು. ಮುಡಾ ಕಚೇರಿ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿ, ಕೋರ್ಟ್ ಆದೇಶ ಮಾಡಿದೆ, ತನಿಖೆ ಪ್ರಾರಂಭವಾಗಿದೆ. ಅಂತಿಮವಾಗಿ ಏನು ಆಗುತ್ತೋ ನೋಡೋಣ ಎಂದರು.
ರಾಜ್ಯದಲ್ಲಿ ಸರ್ಕಾರ ಇದ್ಯಾ?
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹೇಗಿದೆ ನೋಡ್ತಿದ್ದೇನೆ. ಆಡಳಿತ ನಡೀತಿದ್ಯಾ? ಸರ್ಕಾರ ಇದೆಯಾ? ಎಣದು ಪ್ರಶ್ನಿಸಿದರು. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ.ಬಾಗಲಕೋಟೆ, ಹಾವೇರಿ, ಚಿತ್ರದುರ್ಗದಲ್ಲಿ ಏನಾಗಿದೆ. ಈರುಳ್ಳಿ, ದ್ರಾಕ್ಷಿ, ಜೋಳ ಬೆಳೆಯುವವರ ಸ್ಥಿತಿ ಏನಾಗಿದೆ. ಅದರ ಬಗ್ಗೆ ಕೇಳುವವರು ದಿಕ್ಕಿಲ್ಲದಂತಾಗಿದೆ. ಬೆಂಗಳೂರು ನಗರ ಜಲಾವೃತವಾಗಿದೆ. ಯಾರಾದ್ರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರಾ? ಅದರ ಬಗ್ಗೆ ಯಾರಿಗಾದ್ರು ಚಿಂತನೆ ಇದ್ಯಾ? ಎಂದು ಹರಿಹಾಯ್ದರು. ಅಲ್ಲದೆ ಡಿಸಿಎಂ ಡಿ ಕೆ ಶಿವಕುಮಾರ್ ಗೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆಯಾ ಅಂದಿದ್ದು ಇದಕ್ಕೆ. 15 ಸಾವಿರ ಹುದ್ದೆಗಳು ಖಾಲಿ ಇದೆ ಅಂತಾರೆ.70 ಹುದ್ದೆ ತುಂಬಿಸಲು ಹೊರಟಿದ್ದಾರೆ. ಸಿಎಂ, ಸರ್ಕಾರ ಕಲ್ಯಾಣ ಕರ್ನಾಟಕದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ರು. ಯಾವ ರೀತಿ ಅವರನ್ನು ಕಾಣ್ತಿದ್ದಾರೆ, ಯಾವ ಕಮಿಟ್ಮೆಂಟ್ ಇಟ್ಟುಕೊಂಡಿದ್ದಾರೆಂದು ಕಾಣ್ತಿದೆ ಎಂದು ವ್ಯಂಗ್ಯವಾಡಿದರು.