ಪ್ರತಿನಿಧಿ ವರದಿ ಮೈಸೂರು
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕಾಗಮಿಸಿರುವ ಮಾವುತರು ಮತ್ತು ಕಾವಾಡಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಬುಧವಾರ ಆರೋಗ್ಯ ತಪಾಸಣೆ ಕಾರ್ಯ ನಡೆಸಲಾಯಿತು. ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೈಸೂರಿನ ನಾರಾಯಣ ಆಸ್ಪತ್ರೆಯಿಂದ ನಡೆಸಲಾದ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಡಿಸಿಎಫ್ ಡಾ. ಪ್ರಭುಗೌಡ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 150ಕ್ಕೂ ಹೆಚ್ಚು ಮಾವುತರು ಹಾಗೂ ಕಾವಾಡಿಗರ ಕುಟುಂಬದ ಸದಸ್ಯರಿಗೆ ಇಸಿಜಿ, ಎಕೋ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತದ ಗುಕ್ಲೋಸ್ ಮಟ್ಟವನ್ನು ಪರೀಕ್ಷೆ ನಡೆಸಲಾಯಿತು. ಜೊತೆಗೆ ವೈದ್ಯರೊಂದಿಗೆ ಆಪ್ತ ಸಮಾಲೋಚನೆಯನ್ನು ಮಾಡಲಾಯಿತು. ಈ ವೇಳೆ ಮಾತನಾಡಿದ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಕಾಡಿನಲ್ಲಿ ವಾಸಿಸುವ ಮಾವುತರು ಹಾಗೂ ಕಾವಾಡಿಗರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವುದಿಲ್ಲ. ಇದೀಗ ದಸರಾಗೆ ಆಗಮಿಸಿರುವ ಆನೆ ಪಾಲಕರಿಗೆ ಉಚಿತ ಆರೋಗ್ಯ ಸೇವೆ ಸಿಕ್ಕಿರುವುದು ಖುಷಿಯ ವಿಚಾರ ಎಂದರು. ಶಿಬಿರದಲ್ಲಿ ನಾರಾಯಣ ಆಸ್ಪತ್ರೆ ಉಪ ವೈದ್ಯಕೀಯ ಅಧೀಕ್ಷಕ ದೀಪಕ್ ಬೆಟದೂರ್, ಆರ್ಎಫ್ಒ ಸಂತೋಷ್ ಇತರರಿದ್ದರು.
==================
Leave a comment